ಕಲಬುರ್ಗಿ: ಕೇಂದ್ರ ಸರ್ಕಾರವು ಕಲಬುರ್ಗಿಗೆ ‘ಮೆಗಾ ಜವಳಿ ಪಾರ್ಕ್’ ಮಂಜೂರು ಮಾಡಿದ್ದು ಇದಕ್ಕೆ ಅಗತ್ಯವಿರುವ 1 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಶನಿವಾರ ಇಲ್ಲಿ ನಡೆಸಿದ ಪ್ರವಾಹ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾಈ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಿರಾಣಿ, ‘ಜವಳಿ ಪಾರ್ಕ್ ಮಾಡಿದ ಬಳಿಕ ಮೂಲ ಸೌಕರ್ಯ ಅಭಿವೃದ್ಧಿಗೂ ಹೆಚ್ಚುವರಿ ಭೂಮಿ ಬೇಕಾಗುತ್ತದೆ. ಜತೆಗೆ, ಮುಂದಿನ ದಿನಗಳಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೂ ಜಾಗ ಬೇಕು. ಹೀಗಾಗಿ ಜಿಲ್ಲೆಯಲ್ಲಿ 5 ಸಾವಿರ ಎಕರೆ ಭೂಸ್ವಾಧೀನಕ್ಕೆ ಜಾಗ ಗುರುತಿಸಿ’ ಎಂದು ನಿರ್ದೇಶನ ನೀಡಿದರು.
ದಶಕದ ಹಿಂದೆ ಮಂಜೂರಾಗಿದ್ದ ‘ಜವಳಿ ಪಾರ್ಕ್’ ಅನ್ನು ಕಳೆದ ವರ್ಷ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಈಗ ಹೊಸದಾಗಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಮಂಜೂರು ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಡಾ. ಉಮೇಶ ಜಾಧವ, ’ಕೇಂದ್ರ ಸರ್ಕಾರ ದೇಶದ ವಿವಿಧೆಡೆ ಏಳು ಮೆಗಾ ಟೆಕ್ಸ್ಟೈಲ್ ಪಾರ್ಕ್ ಮಂಜೂರು ಮಾಡಿದ್ದು, ಅದರಲ್ಲಿ ಕಲಬುರ್ಗಿಯೂ ಸೇರಿದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶ, ಅಭಿವೃದ್ಧಿ ಸಾಧ್ಯವಾಗುತ್ತದೆ‘ ಎಂದರು.