ಕಲಬುರ್ಗಿ: ಸದ್ಯಕ್ಕೆಮುಷ್ಕರ ಒಳ್ಳೆಯದಲ್ಲ ಎಂಬ ಕರ್ನಾಟಕ ಹೈಕೋರ್ಟ್ ಅಭಿಪ್ರಾಯಕ್ಕೆ ಮಣಿದಿರುವ ಸರ್ಕಾರಿ ಸಾರಿಗೆ ಸಂಸ್ಥೆ ನೌಕರರು ಬುಧವಾರ ಬೆಳಿಗ್ಗೆಯಿಂದ ಕೆಲಸಕ್ಕೆ ಹಾಜರಾಗುತ್ತಿದ್ದು, ಕಲಬುರ್ಗಿಯ ಎರಡೂವಿಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಸಂಚಾರ ಆರಂಭಿಸಿವೆ.
ಇದರಿಂದಾಗಿ ಖಾಸಗಿ ಬಸ್ ಗಳ ಮಾಲೀಕರು ತಮ್ಮ ಸೇವೆಯನ್ನು ಬಹುತೇಕ ವಾಪಸ್ ಪಡೆದಿದ್ದಾರೆ.
ಬೆಳಿಗ್ಗೆಯಿಂದಲೇ ಕಲಬುರ್ಗಿ ಬಸ್ ನಿಲ್ದಾಣದಿಂದ ವಿಜಯಪುರ, ಬೀದರ್, ಯಾದಗಿರಿ, ರಾಯಚೂರು ಹಾಗೂ ತೆಲಂಗಾಣದ ಹೈದರಾಬಾದ್ ನಗರಗಳಿಗೆ ಸಾರಿಗೆ ಬಸ್ ಸೇವೆ ಆರಂಭಗೊಂಡಿತು.
ಕಳೆದ 14 ದಿನಗಳಿಂದ ಬಹುತೇಕ ಸ್ಥಗಿತಗೊಂಡಿದ್ದ ನಗರ ಸಾರಿಗೆ ಪುನರಾರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಇನ್ನಷ್ಟು ಬಸ್ ಗಳ ಸಂಚಾರ ಆರಂಭಗೊಳ್ಳಲಿದೆ ಎಂಬ ಭರವಸೆಯನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸೇವೆಯಿಂದ ವಜಾ ಹಾಗೂ ಅಮಾನತುಗೊಂಡಿರುವ ಸಿಬ್ಬಂದಿಯನ್ನು ವಾಪಸ್ ಕರ್ತವ್ಯಕ್ಕೆ ತೆಗೆದುಕೊಳ್ಳುವ ಚಿಂತನೆ ಸಂಸ್ಥೆಯ ಮುಂದೆ ಇಲ್ಲ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಅವರ ಹೇಳಿಕೆಯೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಕಾರಣ ಎನ್ನಲಾಗುತ್ತಿದೆ.