ಕಲಬುರ್ಗಿ: ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ಲಾಕಡೌನ್ ಘೋಷಿಸಿದ್ದು ಸರಿಯಾದ ಕ್ರಮ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮರ್ಥಿಸಿಕೊಂಡರು.
ಸೇಡಂನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಲಾಕಡೌನ್ ಘೋಷಿಸಿದ್ದನ್ನು ವಿಶ್ವದ ನಾಯಕರು ಶ್ಲಾಘಿಸಿದ್ದಾರೆ ಎಂದರು.
ಲಾಕಡೌನ್ ಬಗ್ಗೆ ರಾಹುಲ್ ಗಾಂಧಿಯವರು ರಾಜಕಾರಣಕ್ಕಾಗಿ ಟೀಕಿಸುತ್ತಿದ್ದಾರೆ ಹೊರತು ಮತ್ತೇನೂ ಇಲ್ಲ ಎಂದು ಅವರು ಹೇಳಿದರು.
ಲಾಕಡೌನನಲ್ಲಿ ಸಿಲುಕಿದ 3 ಕೋಟಿಗೂ ಹೆಚ್ಚು ಜನರು, ವಲಸೆ ಕಾರ್ಮಿಕರಿಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನೆರವಾಗಿದ್ದಾರೆ. ಆಹಾರ ಕಿಟ್ ಮತ್ತು ಅಗತ್ಯ ಸೌಕರ್ಯ ಒದಗಿಸಿದ್ದಾರೆ ಎಂದು ಕಟೀಲ್ ಹೇಳಿದರು.
ಸಚಿವ ಪ್ರಭು ಚವ್ಹಾಣ್, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ರಾಜಕುಮಾರ ತೆಲ್ಕೂರ, ಮುಖಂಡ ಮಾಲೀಕಯ್ಯ ಗುತ್ತೇದಾರ ಇದ್ದರು.