ಕಲಬುರ್ಗಿ: ಖಾಜಿ ಕಚೇರಿಯಲ್ಲಿ ಮುಸ್ಲಿಂ ಸಮಾಜಕ್ಕೆ ಮದುವೆಗೆ ಅನುಮತಿ ಕೊಡಬೇಕು ಎಂದು ಒತ್ತಾಯಿಸಿ ನಯಾ ಸವೇರಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಪ್ರದರ್ಶನ ಮಾಡಿದರು.
‘ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮನೆಯಲ್ಲಿ ಮದುವೆ ಸಮಾರಂಭ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶವನ್ನು ಹಾಗೂ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡುವುದನ್ನು ಸ್ವಾಗತಿಸುತ್ತೇವೆ. ಆದಾಗ್ಯೂ, ಮುಸ್ಲಿಂ ಸಮುದಾಯಕ್ಕೆ ಆ ರೀತಿ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನು ಒಪ್ಪುವುದಿಲ್ಲ’ ಎಂದು ಸಂಘಟನೆ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ತಿಳಿಸಿದರು.
ಇಸ್ಲಾಂನಲ್ಲಿ ನಿಖಾಹ್ ಆಗಬೇಕಾದರೆ ಅದಕ್ಕಾಗಿ ಖಾಜಿ ಕಚೇರಿಯಲ್ಲಿ ಮದುವೆ ಮಾಡಿಸುವುದಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿದ ಅವರು, ಮದುವೆಯು ಅವರವರ ಧರ್ಮಗಳ ಪ್ರಕಾರ ಜರುಗುತ್ತವೆ. ಹಾಗಾಗಿ ಮುಸ್ಲಿಂ ಸಮುದಾಯಕ್ಕೆ ಖಾಜಿ ಕಚೇರಿಯಲ್ಲಿ ಮದುವೆಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನೀಲಕಂಠರಾವ ಮೂಲಗೆ, ಖಾಜಿ ಹಮೀದ್ ಫೈಸಲ್, ಚೇತನ ಗೋನಾಯಕ, ಶರಣ ಪಾಟೀಲ ಇತರರಿದ್ದರು.