ಕಲಬುರ್ಗಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ನಾಲ್ಕನೇ ದಿನವೂ ಮುಂದುವರಿಯಿತು. ಇದರ ಮಧ್ಯೆ ಅಧಿಕಾರಿಗಳು ಹಲವು ಸಿಬ್ಬಂದಿಯ ಮನವೊಲಿಸಿದ್ದು, ಸುಮಾರು 270 ಬಸ್ಗಳು ಸಂಚರಿಸಿದವು.
ಕಳೆದ ಮೂರು ದಿನಗಳಿಂದ ಮುಷ್ಕರದಿಂದ ಬೇಸತ್ತಿದ್ದ ಪ್ರಯಾಣಿ ಕರು ಶನಿವಾರ ಬಸ್ ನಿಲ್ದಾಣಕ್ಕೆ ಬರಲಿಲ್ಲ. ಇದರಿಂದ ಇಡೀ ನಿಲ್ದಾಣದ ಒಳಗೆ ಕಡಿಮೆ ಸಂಖ್ಯೆಯ ಪ್ರಯಾಣಿಕರು ಮಾತ್ರ ಕಂಡುಬಂದರು. ಬಸ್ ನಿಲ್ದಾಣ ದಿಂದಲೇ ಹಲವು ಖಾಸಗಿ ಬಸ್ ಹಾಗೂ ಟೆಂಪೊಗಳ ಸಂಚಾರ ಮುಂದುವರಿದಿತ್ತು.
‘ಜನರಿಗೆ ತೊಂದರೆಯಾಗದಂತೆ ವಾಹನ ಓಡಿಸಲು 122 ಚಾಲನಾ ಮತ್ತು 27 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 149 ಸಿಬ್ಬಂದಿಯ ಎರವಲು ಸೇವೆ ರದ್ದುಗೊಳಿಸಿ, ಮೂಲ ಹುದ್ದೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಎನ್ಇಕೆ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.
ಮುಷ್ಕರದ ನಡುವೆಯೂ 358 ಖಾಸಗಿ ಬಸ್, 191 ಆಂಧ್ರಪ್ರದೇಶ ಮತ್ತು ತೆಲಂಗಾಣ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ 2757 ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
₹ 4.5 ಕೋಟಿ ಆದಾಯ ಕೊರತೆ: ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ ಪ್ರತಿದಿನ ₹ 4.5 ಕೋಟಿ ಆದಾಯದಲ್ಲಿ ಕೊರತೆಯಾಗಿದೆ. ಹೀಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಎಂ.ಕೂರ್ಮರಾವ್ ಮನವಿ ಮಾಡಿದ್ದಾರೆ.