ಕಲಬುರ್ಗಿ: ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ 31 ಸ್ಥಾನಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದ್ದು, ಇದೇ 14ರಿಂದ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಮಹಾಸಭಾದ ಸಹಾಯಕ ಚುನಾವಣಾಧಿಕಾರಿ ಶರಣಬಸಪ್ಪ ಎಸ್.ಕಡಾದಿ, ‘3820 ಜನ ಸದಸ್ಯರಿದ್ದು, ಸರಾಸರಿ 800ಕ್ಕೆ ಒಂದು ಬೂತ್ನಂತೆ ಒಟ್ಟು ಐದು ಬೂತ್ಗಳನ್ನು ಆರಂಭಿಸಲಾಗುವುದು’ ಎಂದರು.
ಸೆ 19ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಸೆ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆ 23ರಂದು ಮಧ್ಯಾಹ್ನ 3ರವರೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶವಿದೆ. 29ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮಯದಾನ ನಡೆಯಲಿದೆ. ಆ ನಂತರ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
ಎಲ್ಲ ಸದಸ್ಯರಿಗೂ ಗುರುತಿನ ಚೀಟಿಗಳನ್ನು ವೀರಶೈವ ಮಹಾಸಭಾದಿಂದ ವಿತರಿಸಲಾಗಿದೆ. ಸಂಘದ ಚೀಟಿ ಇಲ್ಲದಿದ್ದರೂ ಚುನಾವಣೆಯಲ್ಲಿ ತೋರಿಸಬೇಕಾದ 21 ಗುರುತಿನ ಚೀಟಿಗಳ ಪೈಕಿ ಯಾವುದಾದರೂ ಒಂದು ತೋರಿಸಿ ಮತದಾನ ಮಾಡಬಹುದು ಎಂದರು.
31 ಸ್ಥಾನಗಳ ಪೈಕಿ ಒಬ್ಬರು ಅಧ್ಯಕ್ಷರು, 20 ಪುರುಷ ಸದಸ್ಯರು, 10 ಮಹಿಳಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾಯಿತ ಸದಸ್ಯರು ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಂಘದ ಖಜಾಂಚಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಸಹಾಯಕ ರಾಚಪ್ಪ ಅಕ್ಕೋಣಿ, ನಾಗಣ್ಣ ಗಂಜರಖೇಡ, ಬಸವರಾಜ ಆವಂತಿ ಹಾಗೂ ಸಮಾಜದ ಮುಖಂಡ ಸಂಗಣ್ಣ ಇಜೇರಿ ಗೋಷ್ಠಿಯಲ್ಲಿದ್ದರು.