ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವಗಳನ್ನೇ ತತ್ವಗಳಾಗಿ ಮಂಡಿಸಿದ ಶರಣರು: ಡಾ.ಜಯಶ್ರೀ ದಂಡೆ

ಆನ್‍ಲೈನ್ ಅರಿವಿನ ಮನೆ ಕಾರ್ಯಕ್ರಮ
Last Updated 19 ಅಕ್ಟೋಬರ್ 2021, 4:12 IST
ಅಕ್ಷರ ಗಾತ್ರ

ಕಲಬುರಗಿ: ‘ಶರಣರು ಅಷ್ಟಾವರಣಗಳನ್ನು ಅಂಗವೆಂದು, ಪಂಚಾಚಾರಗಳನ್ನು ಪ್ರಾಣವೆಂದು, ಷಟ್‌ಸ್ಥಲಗಳನ್ನು ಆತ್ಮವೆಂದು ಪರಿಗಣಿಸಿ ಹೊಸತತ್ವ ಚಿಂತನೆಯನ್ನು ರೂಪಿಸಿದರು. ಅವರು ಎಂದಿಗೂ ತಿಳಿಯದ ತತ್ವವನ್ನು ಸಮಾಜದ ಮೇಲೆ ಹೇರಲಿಲ್ಲ. ಕೃತಿಗಳಲ್ಲಿ ಮಾತ್ರ ಸೀಮಿತವಾಗಿರುವ ವಿಷಯಗಳನ್ನು ಎಂದೂ ಮಂಡಿಸದೆ, ನಾವು ಸ್ವತಃ ಅನುಭವಿಸಿ ನಿರ್ಣಯಿಸ ಬಹುದಾದಂತಹ ಸಂಗತಿಗಳನ್ನೇ ತತ್ವವಾಗಿಸಿದ್ದು ವಿನೂತನವಾಗಿ ಕಾಣಿಸುತ್ತದೆ‌’ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಶ್ರೀ ದಂಡೆ ಹೇಳಿದರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಭಾನುವಾರ 684ನೇ ಆನ್‍ಲೈನ್ ಅರಿವಿನ ಮನೆ ಕಾರ್ಯಕ್ರಮದಲ್ಲಿ ‘ಲಿಂಗ ತತ್ವ’ ಕುರಿತು ಉಪನ್ಯಾಸ ನೀಡಿದರು.

‘ಇಷ್ಟಲಿಂಗ– ಜಂಗಮ ಇವರೆಡೂ ಬಸವಣ್ಣನವರ ಉದರದಲ್ಲಿಯೇ ಜನಿಸಿದವು ಎಂದು ಚೆನ್ನಬಸವಣ್ಣನವರು ಹೇಳುತ್ತಾರೆ. ಅಷ್ಟಾವರಣದ ಗಾಂಭಿರ್ಯತೆಯ ತತ್ವವೇ ಬಸವಣ್ಣನವರ ಉದರದಿಂದ ಜನಿಸಿದ್ದು ಎಂದೂ ಹೇಳಲಾಗುತ್ತಿದೆ. ಅವರ ಎದೆಯಾಳದಲ್ಲಿ ಆ ಎಲ್ಲ ತತ್ವಗಳ ಜ್ಞಾನ ಅಡಗಿತ್ತು. ಲಿಂಗದ ಲೀಲೆಯಿಂದ ಅಂಗತತ್ವ, ಲಿಂಗತತ್ವ, ಶಿವತತ್ವ, ಪರತತ್ವ ಮೊದಲಾದವುಗಳನ್ನೆಲ್ಲ ಒಳಗೊಂಡು ನಿರೀಕ್ಷಣ ಮೂರ್ತಿಯಾಗಿ ಇಷ್ಟಲಿಂಗ ನಮ್ಮ ಅಂಗದ ಮೇಲೆ ನೆಲೆಸಿದೆ ಎಂದು ಅಲ್ಲಮಪ್ರಭು ಹೇಳುತ್ತಾರೆ. ಪರಮಾನಂದ ಭಾವದಿಂದ ಇಷ್ಟಲಿಂಗವನ್ನು ನೋಡಿ ತತ್ವದಲ್ಲಿ ನಿಶ್ಚಯವನ್ನು ಮಾಡಬೇಕು ಎನ್ನುವ ಸಂಗತಿಯನ್ನು ಮೆರೆಮಿಂಡದೇವ ಶರಣರು ನಮ್ಮ ಮುಂದೆ ಇಡುತ್ತಾರೆ. ಹೀಗೆ ತತ್ವಗಳೆಲ್ಲವೂ ಶರಣರ ಪ್ರಯೋಗಗಳೇ ಆಗಿವೆ’ ಎಂದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ, ಪ್ರಧಾನ ಕಾರ್ಯದರ್ಶಿ ಬಂಡಪ್ಪ ಕೇಸೂರ ಇದ್ದರು. ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT