ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮೂರನೇ ಅಲೆ ಎದುರಿಸಲು ಸಜ್ಜು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ಅವರೊಂದಿಗೆ ‘ಪ್ರಜಾವಾಣಿ’ ಫೋನ್ ಇನ್
Last Updated 6 ಆಗಸ್ಟ್ 2021, 3:38 IST
ಅಕ್ಷರ ಗಾತ್ರ

ಕಲಬುರ್ಗಿ: ಸಂಭವನೀಯ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಖಾಲಿ ಇದ್ದ ಮಕ್ಕಳ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆ ಗಳಲ್ಲಿ ತಲಾ 10 ಬೆಡ್‌ಗಳನ್ನು ಮಕ್ಕಳಿಗಾಗಿ ಮೀಸಲಿಡ ಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ಹೇಳಿದರು.

ಇಲ್ಲಿನ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಅವರೊಂದಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮರ ದೇಶಮುಖ ಕೂಡ ಓದುಗರ ಸಂದೇಹಗಳನ್ನು ದೂರ ಮಾಡಿದರು.

ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ, ನಿರಂತರವಾಗಿ ಆಮ್ಲಜನಕವನ್ನು ಪೂರೈಸಲು ಅಗತ್ಯವಿರುವ ಹೆಚ್ಚು ಸಾಮರ್ಥ್ಯದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದೆ ಎಂದರು.

ಓದುಗರ ಪ್ರಶ್ನೆಗಳು ಹಾಗೂ ಅದಕ್ಕೆ ಡಾ. ಗಣಜಲಖೇಡ ಅವರು ನೀಡಿದ ಉತ್ತರ ಈ ಕೆಳಕಂಡಂತಿವೆ.

l ರೇಣುಕಾ ಸರಡಗಿ, ಸ್ಲಂ ಜನಾಂದೋಲನ ಸಂಘಟನೆ ಸಂಚಾಲಕಿ: ಕೊಳೆಗೇರಿ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ನಿಯಮಿತ ನಡೆಯುತ್ತಿಲ್ಲ ಏಕೆ?

–ಆರೋಗ್ಯ ಇಲಾಖೆಯ ಬಳಿ ಅಗತ್ಯವಿರುವಷ್ಟು ಕೋವಿಡ್ ಲಸಿಕೆ ಲಭ್ಯವಿದೆ. ಲಸಿಕೆಯನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಿಗೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ಯಾವ ಕೊಳೆಗೇರಿಯಲ್ಲಿ ಲಸಿಕೆ ಅಭಿಯಾನ ನಡೆದಿಲ್ಲವೋ ಅಲ್ಲಿಗೆ ಸಮೀಪದ ನಗರ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾಹಿತಿ ನೀಡಿದರೆ ಅವರು ಸಿಬ್ಬಂದಿಯೊಂದಿಗೆ ಅಲ್ಲಿಗೆ ಬರುತ್ತಾರೆ.

l ಜಯಶ್ರೀ ಕಟ್ಟಿಮನಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ: ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ ಅದನ್ನು ಪತ್ತೆ ಹಚ್ಚುವುದು ಹೇಗೆ?

ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು, ಭಯಪಡುವ ಅಗತ್ಯವಿಲ್ಲ. ಆದರೂ, ಮಕ್ಕಳಲ್ಲಿ ಆಗಿಂದಾಗ್ಗೆ ಜ್ವರ, ನೆಗಡಿಯ ಲಕ್ಷಣಗಳು ಇದ್ದರೆ ಜಿಲ್ಲಾ ಆಸ್ಪತ್ರೆಗೆ ಕರೆತಂದರೆ ಕೊರೊನಾ ತಪಾಸಣೆ ಮಾಡಲಾಗುತ್ತದೆ. ತಕ್ಷಣವೇ ತಪಾಸಣೆ ನಡೆಸಿದರೆ ಕೋವಿಡ್‌ ಚಿಕಿತ್ಸೆಯನ್ನೂ ತಕ್ಷಣಕ್ಕೆ ಶುರು ಮಾಡಬಹುದಾಗಿದೆ.

l ರಾಧಾ ಜಿ. ಕಲಬುರ್ಗಿ: ಹಲವು ಆಶಾ ಕಾರ್ಯಕರ್ತೆಯರಿಗೆ ತಿಂಗಳ ಭತ್ಯೆ ಸರಿಯಾಗಿ ಬರುತ್ತಿಲ್ಲ.

–ತಿಂಗಳ ಗೌರವಧನ ಬಿಡುಗಡೆ ಕೆಲ ತಿಂಗಳ ಹಿಂದೆ ವಿಳಂಬವಾಗುತ್ತಿತ್ತು. ಇದೀಗ ಸರಿಯಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ತಾವು ಮಾಡಿದ ಕೆಲಸಗಳ ಬಗ್ಗೆ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕಿರುತ್ತದೆ. ಆದರೆ, ಯಾರು ಭರ್ತಿ ಮಾಡಿರುವುದಿಲ್ಲವೋ ಅಂಥವರಿಗೆ ವೇತನ ಪಾವತಿ ವಿಳಂಬವಾಗುತ್ತದೆ. ನಿರ್ದಿಷ್ಟ ಪ್ರಕರಣಗಳು ಗಮನಕ್ಕೆ ಬಂದರೆ ತಕ್ಷಣ ಸರಿಪಡಿಸುತ್ತೇನೆ.

l ಮಲ್ಲಿಕಾರ್ಜುನ ಪಾಟೀಲ, ಸಲಗರ ಬಸಂತಪುರ: ಕೋವಿಡ್‌ನಿಂದ ಮನೆಯಲ್ಲಿ ಸತ್ತವರಿಗೆ ಪರಿಹಾರ ಬರುತ್ತದೆಯೇ?

–ಸೋಂಕು ತಗಲಿ ಆಸ್ಪತ್ರೆಯಲ್ಲಿ ಮೃತಪಟ್ಟವರ ವಿವರ ನೇರವಾಗಿ ಬುಲೆಟಿನ್‌ನಲ್ಲಿ ಸೇರುತ್ತದೆ. ಅವರ ಕುಟುಂಬಕ್ಕೆ ಪರಿಹಾರ ದೊರಕಲಿದೆ. ಮನೆಯಲ್ಲಿ ಸತ್ತರೂ ಅದನ್ನು ಕೋವಿಡ್‌ ಮರಣ ಎಂದು ಗುರುತಿಸಲು ಪರೀಕ್ಷೆ ನಡೆಸಬೇಕಾಗುತ್ತದೆ. ಖಚಿತವಾದರೆ ಅವರನ್ನೂ ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಲಾಗುವುದು. ಆದರೆ, ಒಮ್ಮೆ ಕೋವಿಡ್‌ ಬಂದು ಗುಣವಾದ ಮೇಲೆ ಮೃತಪಟ್ಟರೆ ಅವರಿಗೆ ಪರಿಹಾರ ಸಿಗುವುದಿಲ್ಲ.

l ಅಶೋಕ ಜಾಜಿ, ಚೇಂಗಟಾ: ಚೇಂಗಟಾ ಹಾಗೂಐನಾಪುರ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವಾಗ ಮಂಜೂರಾಗುತ್ತದೆ?

–ಹೊಸದಾಗಿ ಆಸ್ಪತ್ರೆ ಮಂಜೂರು ಮಾಡುವುದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಇದಕ್ಕೆ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವ ಸಲ್ಲಿಸಬೇಕು. ಅದನ್ನು ನಾವು ಸರ್ಕಾರಕ್ಕೆ ತಲುಪಿಸುತ್ತೇವೆ. ಆರೋಗ್ಯ ಕೇಂದ್ರ ಇಲ್ಲದ ಕಾರಣ ಆಗುತ್ತಿರುವ ಮಾಹಿತಿಯನ್ನೂ ಪ್ರಸ್ತಾವದಲ್ಲಿ ನೀಡಬೇಕು. ಹೆಚ್ಚಿನ ಮಾಹಿತಿ ಬೇಕಾದರೆ ಗ್ರಾಮಸ್ಥರು ನೇರವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಂಪರ್ಕಿಸಿ.

l ರಾಮರೆಡ್ಡಿ ಪಾಟೀಲ, ಚಿಮ್ಮನಚೋಡ: ಗ್ರಾಮದ ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರೇ ಇರುವುದಿಲ್ಲ.

–ಚಿಮ್ಮನಚೂಡನಲ್ಲಿ ವೈದ್ಯರಿಗಾಗಿ ವಸತಿ ಸೌಕರ್ಯವನ್ನೂ ನೀಡಲಾಗಿದೆ. ಅಲ್ಲಿ ಈಗ ಒಬ್ಬರೇ ವೈದ್ಯ ಇದ್ದು, ಬೇರೆಬೇರೆ ಕೆಲಸಗಳ ಹೊಣೆ ಹೊರಿಸಲಾಗಿದೆ. ರಾತ್ರಿ ಕೂಡ ಗ್ರಾಮದಲ್ಲಿ ಇರುವಂತೆ ಸೂಚನೆ ನೀಡಲಾಗುವುದು. ಇನ್ನೊಬ್ಬ ವೈದ್ಯರನ್ನು ನೇಮಿಸಲು ಯತ್ನಿಸಲಾಗುವುದು.

l ಮಳಖೇಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಯಾವಾಗ ನೀಡುತ್ತೀರಿ?

–ಹಲವು ಆಂಬುಲೆನ್ಸ್‌ಗಳನ್ನು ಕೋವಿಡ್‌ ಕೆಲಸಕ್ಕೇ ಬಳಸಿಕೊಳ್ಳುತ್ತಿರುವ ಕಾರಣ ಅಲ್ಲಿ ಕೊರತೆ ಬಿದ್ದಿರಬಹುದು. ಈಗಾಗಲೇ ಮಳಖೇಡ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಮಂಜೂರಾಗಿದೆ. ಅಲ್ಲಿ ಡ್ರೈವರ್‌ ಇಲ್ಲದ ಕಾರಣ ಅದು ಪೆಂಡಿಂಗ್‌ ಇದೆ. ಶೀಘ್ರ ಅದನ್ನೂ ಸರಿಪಡಿಸಲಾಗುವುದು.

l ಕನಕಪುರ ಶ್ರೀಧರ ವಗ್ಗಿ: ಆನೆಕಾಲು ರೋಗ ನಿರೋಧಕ ಮಾತ್ರೆಗಳನ್ನು ಈ ಬಾರಿ ನೀಡಿಲ್ಲ.

–ಮೂರು ತರಹದ ಮಾತ್ರೆಗಳನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್‌ ಎರಡನೇ ಅಲೆ ಬಂದ ನಂತರ ಈ ಮಾತ್ರೆ ಹಾಗೂ ಸಿಬ್ಬಂದಿ ಕೊರತೆ ಆಗಿದ್ದರಿಂದ ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ವರ್ಷಕ್ಕೆ ಒಂದುಬಾರಿ ಮಾತ್ರ ಮಾತ್ರೆ ನೀಡಲಾಗುತ್ತದೆ. ಒಂದು ವೇಳೆ ಆನೆಕಾಲು ಲಕ್ಷಣಗಳು ಕಂಡುಬಂದರೆ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲೂ ನಿರಂತರವಾಗಿ ಉಚಿತ ಚಿಕಿತ್ಸೆ ಸಿಗುತ್ತದೆ.

l ಸುರೇಶ ದೇಶಪಾಂಡೆ, ನಾಗರಾಜ ಮಲಕೂಡ: ಹಳ್ಳಿಗಳಿಗೆ ಬಂದು ಕೋವಿಡ್‌ ಲಸಿಕೆ ಶಿಬಿರ ಏಕೆ ಮಾಡುತ್ತಿಲ್ಲ?

–ಬಹುಪಾಲು ಎಲ್ಲ ಆರೋಗ್ಯ ಕೇಂದ್ರ ಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಅಲ್ಲಿಗೆ ಹೋಗಲು ಸಾಧ್ಯವಾಗದವರು ಮನವಿ ಸಲ್ಲಿಸಿ ತಮ್ಮಲ್ಲಿ ಲಸಿಕಾ ಶಿಬಿರ ನಡೆಸಲು ಅನುವು ಮಾಡಿಕೊಡಬೇಕು. ಲಸಿಕೆಯ ಒಂದು ವೈಲ್‌ ತೆರೆದರೆ ಕನಿಷ್ಠ 10 ಮಂದಿಗೆ ಹಾಕಲೇಬೇಕು. ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ.

l ಶಿವಾನಂದ ಹೊನಗುಂಟಿ: ಡೆಂಗಿ, ಮಲೇರಿಯಾ ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕ್ರಮೇಣ ಡೆಂಗಿ, ಮಲೇರಿಯಾ ಪ್ರಕರಣಗಳು ಹೆಚ್ಚಾ ಗುತ್ತಿವೆ. ಇವುಗಳನ್ನು ತಡೆಯಲು ಇರುವ ಉಪಾಯವೆಂದರೆ ಮನೆಯಲ್ಲಿ ಬಹಳ ದಿನಗಳಿಂದ ತೊಟ್ಟಿಗಳು, ಬ್ಯಾರೆಲ್‌, ಏರ್‌ ಕೂಲರ್‌ಗಳಲ್ಲಿ ಸಂಗ್ರಹಿಸಿರುವ ನೀರನ್ನು ತೆರವುಗೊಳಿಸುವುದು, ಸಂಜೆಯಾಗುತ್ತಿ ದ್ದಂತೆಯೇ ಮನೆಯ ಬಾಗಿಲು ಹಾಕಿ ಸೊಳ್ಳೆ ಬರದಂತೆ ತಡೆಯುವುದು. ಇವುಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ನಡೆಸಲಾಗುತ್ತಿದೆ.

ಶೇ 80ರಷ್ಟು ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ

ಚಿತ್ತಾಪುರ ಸೇರಿದಂತೆ ಜಿಲ್ಲೆಯ ಬಹುಪಾಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಚಿತ್ತಾಪುರದ ಪೂಜಾ ಬಂಕಲಗಿ ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಗಣಜಲಖೇಡ, ಕೊರೊನಾ ಬಂದ ಮೇಲೆ ಸರ್ಕಾರಿ ಆಸ್ಪತ್ರೆಗಳ ಮಹತ್ವ ಜನರಿಗೆ ಗೊತ್ತಾಗಿದೆ. ಈ ವರ್ಷ ಶೇ 80ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗಿವೆ. ಶಸ್ತ್ರಚಿಕಿತ್ಸೆಗಳು ಕೂಡ ಯಶಸ್ವಿಯಾಗಿವೆ. ಪ್ರಸೂತಿ ತಜ್ಞರನ್ನೂ ನಿಗದಿತ ಪ್ರಮಾಣದಲ್ಲಿ ನೇಮಿಸಿಕೊಳ್ಳಲಾಗಿದೆ. ಕೋವಿಡ್‌ ಸೋಂಕಿತರು ಹಾಗೂ ಸಾಮಾನ್ಯ ಗರ್ಭಿಣಿಯರ ಹೆರಿಗೆಗೆ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧ ಪಡಿಸಲಾಗಿದೆ ಎಂದರು.

ನಾಲವಾರ, ಫಿರೋಜಾಬಾದ್‌ ಆಸ್ಪತ್ರೆ ಕಟ್ಟಡ ಪರಿಶೀಲನೆ

ನಾಲವಾರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಐದು ವರ್ಷವಾದೂ ಉದ್ಘಾಟನೆ ಆಗಿಲ್ಲ ಕಾರಣವೇನು ಎಂದು ಸಿದ್ದುಗೌಡ ಆಸಂಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ, ನಾಲವಾರ ಅಸ್ಪತ್ರೆಯಲ್ಲಿ ಇರುವ ವೈದ್ಯಕೀಯ ಸಲಕರಣೆಗಳು, ಸಿಬ್ಬಂದಿ ಸಾಮರ್ಥ್ಯದ ಕುರಿತು ಪರಿಶೀಲಿಸಲಾಗುವುದು. ಇಲ್ಲಿನ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ದೂರುಗಳು ಬಂದಿದ್ದು, ಆದಷ್ಟು ಬೇಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಗರ್ಭಿಣಿ, ಬಾಣಂತಿಯರು ಹಾಗೂ ವಯೋವೃದ್ಧರ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಗ್ರಾಮಸ್ಥರು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ನೀಡಬೇಕು.

ಫಿರೋಜಾಬಾದ್‌ನಲ್ಲಿ ಕಟ್ಟಿಸಿದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಪ್ರೌಢಶಾಲೆ ನಡೆಯುತ್ತಿದೆ ಎಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಮಾಹಿತಿ ಗಮನಿಸಿದ್ದೇನೆ. ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಆದ ಗೊಂದಲವೇನು? ಪರಿಹಾರ ಏನು ಎಂದು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸುವುದಾಗಿ ಗಣಜಲಖೇಡ ಭರವಸೆ ನೀಡಿದರು.

ತಾಲ್ಲೂಕು ಆಸ್ಪತ್ರೆ ಇನ್ನೂ ಆರಂಭವಿಲ್ಲ

ಶಹಾಬಾದ್, ಯಡ್ರಾಮಿ, ಕಮಲಾಪುರ ಹಾಗೂ ಕಾಳಗಿ ಹೊಸ ತಾಲ್ಲೂಕುಗಳನ್ನಾಗಿ ರಚಿಸಲಾಗಿದೆ. ಅಲ್ಲಿ ತಾಲ್ಲೂಕು ಆಸ್ಪತ್ರೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯನ್ನು ಆರಂಭಿಸಬೇಕಿದೆ. ಜಾಗವನ್ನು ಗುರುತಿಸಲಾಗಿದ್ದರೂ, ಕಚೇರಿಗಳ ಮಂಜೂರಾತಿ ಆಗದೇ ಇರುವುದರಿಂದ ಇನ್ನೂ ಕೆಲವೆಡೆ ಪ್ರಾಥಮಿಕ ಹಾಗೂ ಇನ್ನು ಕೆಲವೆಡೆ ಸಮುದಾಯ ಆರೋಗ್ಯ ಕೇಂದ್ರಗಳೇ ಇವೆ ಎನ್ನುತ್ತಾರೆ ಡಾ. ಶರಣಬಸಪ್ಪ ಗಣಜಲಖೇಡ.

ರಾಜ್ಯ ಸರ್ಕಾರದಿಂದ ಕಟ್ಟಡ ಹಾಗೂ ಹುದ್ದೆಗಳಿಗೆ ಮಂಜೂರಾತಿ ಸಿಕ್ಕರೆ ತಕ್ಷಣ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಜೊತೆಗೆ, ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಡಿಕೆ ಇದೆ. ಹೊಸದಾಗಿ ಕೇಂದ್ರ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಣಯ ಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT