ಕಲಬುರ್ಗಿ: ‘ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಆಳಂದ ತಾಲ್ಲೂಕಿನ ಪಡಸಾವಳಗಿ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೂನ್ 16ರಂದು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು’ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾ ಮುಲ್ಲಾ ತಿಳಿಸಿದರು.
‘ಬೇಕಾಬಿಟ್ಟಿ ವಾಹನ ಚಲಾವಣೆ ಮಾಡಿ, ಬಾಬು ದಸ್ತಗೀರ ಮೂಲಗೆ ಎಂಬ ರೈತನ ಸಾವಿಗೆ ಕಾರಣವಾಗಿದ್ದಾರೆ. ಗ್ರಾಮದಲ್ಲಿ ಕೂಡ ಪಿಡಿಒ ದಶರಥ ಪಾತ್ರೆ ಅವರ ಕೆಲಸದ ಬಗ್ಗೆ ಅಸಮಾಧಾನವಿದೆ. ಈ ಹಿಂದೆ ಕಾಳಗಿ ತಾಲ್ಲೂಕಿನ ಬ ಎಡಸೂರು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಮಾಡಿ ಅಮಾನತುಗೊಂಡಿದ್ದರು. ಈಗ ಪಡಸಾವಳಗಿಯಲ್ಲೂ ತಮ್ಮ ಚಾಳಿ ಮುಂದುವರಿಸಿದ್ದಾರೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಕುಡಿಯುವ ನೀರಿನ ವ್ಯತ್ಯಯ ಸೇರಿದಂತೆ ಯಾವುದೇ ಸಮಸ್ಯೆಗೂ ಸ್ಪಂದಿಸುವುದಿಲ್ಲ. ನೀರಿನ ಸಮಸ್ಯೆ ಬಗ್ಗೆ ವಿಚಾರಿಸಿದ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮಾದಾರ ಎಂಬುವವರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಇದಕ್ಕೆ ಪಿಎಸ್ಐ ಬಾಪುಗೌಡ ಪಾಟೀಲ ಸಹ ಕುಮ್ಮಕ್ಕು ನೀಡುತ್ತಿದ್ದಾರೆ. ಹಲ್ಲೆಯಾದ ಪ್ರಕರಣ ದಾಖಲಿಸಿಕೊಳ್ಳದೇ, ಮೊದಲು ಪಿಡಿಒ ದೂರು ಪಡೆದಿದ್ದಾರೆ’ ಎಂದು ಕಿಸಾನ್ ಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ದೂರಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮದಾರ, ಕೆಪಿಆರ್ಎಸ್ ಮುಖಂಡ ಅಶೋಕ ಮ್ಯಾಗೇರಿ, ಮುಖಂಡ ರಮೇಶ ಹತ್ತಿ ಕಾಳೆ, ಶಿವ ಪಾಟೀಲ ಇದ್ದರು.