ಕಲಬುರಗಿ: ಪ್ರೇಮಿಗಳ ದಿನ (ವ್ಯಾಲೆಂಟೈನ್ ಡೇ) ಆಚರಣೆ ವಿರೋಧಿಸಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಫೆಬ್ರುವರಿ 14ರಂದು ಪ್ರೇಮಿಗಳ ದಿನ ಆಚರಿಸುವ ಪದ್ಧತಿ ಹೆಚ್ಚಳವಾಗುತ್ತಿದೆ. ವ್ಯವಹಾರಿಕವಾಗಿ ಲಾಭಗಳಿಸುವ ಉದ್ದೇಶದಿಂದ ಪಾಶ್ಚಾತ್ಯರು ಆಚರಿಸುವ ದಿನ ಭಾರತಕ್ಕೆ ಸರಿ ಹೊಂದುವುದಿಲ್ಲ. ದೇಶದ ಯುವಕ–ಯುವತಿಯರನ್ನು ದಾರಿತಪ್ಪಿಸುತ್ತದೆ. ಯುವತಿಯರನ್ನು ಪೀಡಿಸುವ ಮತ್ತು ಹಿಂಸೆಗೆ ಗುರಿ ಮಾಡುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಯುವತಿಯರನ್ನು ಆಕರ್ಷಿಸಲು ಯುವಕರು ಅತಿ ವೇಗದಿಂದ ವಾಹನ ಚಲಾಯಿಸಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಶಾಲಾ–ಕಾಲೇಜುಗಳ ಶೈಕ್ಷಣಿಕ ವಾತಾವರಣ ಹಾಳಾಗುತ್ತದೆ. ಹೀಗಾಗಿ, ಪ್ರೇಮಿಗಳ ದಿನ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಿ, ತಂದೆ–ತಾಯಿಯ ದಿನ ಆಚರಿಸುತ್ತೇವೆ ಎಂದು ಹೇಳಿದರು.
ಪ್ರೇಮಿಗಳ ದಿನ ವಿಶೇಷ ಪೊಲೀಸ್ ದಳ ರಚಿಸಿ, ಶಾಲಾ-ಕಾಲೇಜುಗಳಲ್ಲಿ ಅನುಚಿತವಾಗಿ ವರ್ತಿಸುವವರ ಮೇಲೆ ಕ್ರಮ ಜರುಗಿಸಬೇಕು. ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ಕಣ್ಗಾವಲು ಇರಿಸಬೇಕು. ಶಾಲಾ– ಕಾಲೇಜುಗಳ ಆಡಳಿತ ಮಂಡಳಿ ಇಂತಹುದಕ್ಕೆ ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಘಟಕದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ಕಾರ್ಯದರ್ಶಿ ಸಿದ್ದು ವಿ.ಕಂದಗಲ್, ಪ್ರಕಾಶ್ ವಾಗ್ನೋರೆ, ಮಹದೇವ ಕೋಟನೂರ, ದಶರತ ಇಂಗೋಳೆ, ರಾಜು ಸ್ವಾಮಿ ಉಪಸ್ಥಿತರಿದ್ದರು.