ಆಳಂದ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಹೆಚ್ಚಿನ ಬಸ್ ಸಂಪರ್ಕ ಕಲ್ಪಿಸಬೇಕು ಹಾಗೂ ನೆರೆಯ ಮಹಾರಾಷ್ಟ್ರ ಮಾರ್ಗದ ಬಸ್ಗಳು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಯುವ ಕಾಂಗ್ರೆಸ್ ಸಮಿತಿ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ಮಾರ್ಗವಾಗಿ ರಜ್ವಿ ರಸ್ತೆ, ಸಿದ್ದಾರ್ಥ ಚೌಕ್ದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ಮಾತನಾಡಿ ಮಹಾರಾಷ್ಟ್ರದ ಹಲವು ಪಟ್ಟಣದೊಂದಿಗೆ ಸಂಪರ್ಕಿಸಲು ಜನರಿಗೆ ತೊಂದರೆಯಾಗುತ್ತಿದೆ. ಹಲವು ವ್ಯವಹಾರಗಳಿಗೆ ಬಸ್ ಸ್ಥಗಿತದಿಂದ ಪರದಾಡುವ ಸ್ಥಿತಿ ಇದೆ ಎಂದುಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು, ಮಹಾರಾಷ್ಟ್ರ ಮಾರ್ಗದ ಬಸ್ ಓಡಾಟ ಆರಂಭಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಮುಖಂಡರಾದ ಶಿವಾಜಿ ರಾಠೋಡ, ಶಿವಪುತ್ರ ನಡಗೇರಿ, ವಿಶ್ವನಾಥ ಪವಾಡಶೆಟ್ಟಿ, ಸುಭಾಷ ಪೌಜಿ, ಸತೀಶ ಕಡಗಂಚಿ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡಲು ಆಗ್ರಹಿಸಿದರು.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮನವಿ ಸ್ವೀಕರಿಸಿ, ವಾರದ ಒಳಗೆ ಅಗತ್ಯ ಸಂಪರ್ಕ ಸೇವೆ ಒದಗಿಸುವ ಭರವಸೆ ನೀಡಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ದೌಲಪ್ಪ ಮಸರೆ, ಪಂಡಿತ ಕದರಗಿ, ರವೀಂದ್ರ ಇದ್ದರು.
ಬಸ್ ಸಂಚಾರ ಆರಂಭ: ಪ್ರತಿಭಟನೆ ಕಾವು ಜೋರಾದ ಹಿನ್ನಲೆಯಲ್ಲಿ ಮಧ್ಯಾಹ್ನ ಎಚ್ಚೆತ್ತುಕೊಂಡ ಆಳಂದ ಬಸ್ ಘಟಕವು ಹಿರೋಳ್ಳಿ ಮಾರ್ಗವಾಗಿ ನೆರೆಯ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭಿಸಿದೆ. ಶುಕ್ರವಾರ ಸೋಲಾಪುರ, ಅಕ್ಕಲಕೋಟ, ಪುಣೆ ಸೇರಿದಂತೆ ವಿವಿಧ ಪಟ್ಟಣಗಳಿಗೆ ಬಸ್ ಓಡಾಟ ನಡೆಯಿತು. ಕೋವಿಡ್ ಕಾರಣದಿಂದ ಸ್ಥಗಿತಗೊಂಡ ಬಸ್ಗಳು ಶನಿವಾರದಿಂದ ಗ್ರಾಮೀಣ ಭಾಗದಲ್ಲಿಯೂ ಸಂಚರಿಸಲಿವೆ ಎಂದು ವ್ಯವಸ್ಥಾಪಕ ಜಟ್ಟೆಪ್ಪ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.