ಕಲಬುರ್ಗಿ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೋರ ನೇನಾ ಸಂಘಟನೆ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಪರಿಶಿಷ್ಟ ಸಮುದಾಯಗಳ ಮಧ್ಯದಲ್ಲೇ ಗೊಂದಲ ಮೂಡಿಸುವಂಥ, ಭೇದ ಮಾಡುವಂತ ಅಂಶಗಳು ವರದಿಯಲ್ಲಿವೆ. ವರದಿ ಜಾರಿಗೆ ಆಗ್ರಹಿಸುವ ಭರದಲ್ಲಿ ಕೆಲವರು ಬಂಜಾರ ಸಮಾಜದ ಗುರು ಸೇವಾಲಾಲ್, ಭೋವಿ ಸಮಾಜದ ಗುರು ಸಿದ್ಧರಾಮೇಶ್ವರ ಶರಣರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಸಚಿವ ಪ್ರಭು ಚವಾಣ್ ಅವರನ್ನೂ ಅವಮಾನಿಸಿದ್ದಾರೆ. ಈ ಕುತಂತ್ರಗಳನ್ನು ತಡೆಯಬೇಕು ಎಂದೂ ಒತ್ತಾಯಿಸಿದರು.
ಭೋವಿ, ಬಂಜಾರಾ, ಕೊರಮ, ಕೊರಚ ಇತ್ಯಾದಿ ಜಾತಿಗಳಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಲು ಕೆಲವರು ಹವಣಿಸುತ್ತಿದ್ದಾರೆ. ಇಂತಹ ಕುತಂತ್ರಗಳು ನಿಲ್ಲಬೇಕು. ಏಕಪಕ್ಷೀಯಾಗಿ ಈ ವರದಿಯ ಶಿಫಾರಸಿಗಾಗಿ ನಡೆದ ಕುಮ್ಮಕ್ಕನ್ನು ನಾವು ಸಹಿಸುವುದಿಲ್ಲ ಎಂದು ಘೋಷಣೆ ಮೊಳಗಿಸಿದರು.
ಸಂಘಟನೆ ಮುಖಂಡರಾದ ಈಶ್ವರ ರಾಠೋಡ, ಡಾ.ಸಂತೋಷ ರಾಠೋಡ, ರಾಮಚಂದ್ರ ಜಾಧವ, ಲತಾ ರಾಠೋಡ, ಬಿ.ಬಿ.ನಾಯಕ, ಉಮೇಶ ಚವ್ಹಾಣ, ಶಿವು ಸೈನಿಕ, ಶ್ರೀಧರ ಚವ್ಹಾಣ, ರವಿ ಕಾರಬಾರಿ, ಗುರುರಾಜ ರಾಠೋಡ, ವಿನೋದ ರಾಠೋಡ, ಸುಭಾಷ ಜಾಧವ ನೇತೃತ್ವ ವಹಿಸಿದ್ದರು.