ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರ ಸಂಘಟನೆ ನಗರದ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿರುವ ಅನಿರ್ದಿಷ್ಟ ಅವಧಿಯ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ ಅದಾನಿ ಅವರ ಚಿತ್ರಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ 2020 ರದ್ದುಗೊಳಿಸಬೇಕು, ಭೂಸುಧಾರಣೆ ಮಸೂದೆ ರದ್ದಾಗಬೇಕು, ಗೋಹತ್ಯಾ ನಿಷೇಧ ಮಸೂದೆ ರದ್ದಾಗಬೇಕು, ತೊಗರಿ ಬೆಲೆಯನ್ನು ಕ್ವಿಂಟಲ್ಗೆ ₹ 8 ಸಾವಿರ ದರದಲ್ಲಿ ಖರೀದಿ ಮಾಡಭೇಕು. ತೊಗರಿ ಖದೀದಿ ಕೇಂದ್ರಗಳನ್ನು ಕೂಡಲೇ ತೆರೆದು ಎಲ್ಲರ ರೈತರ ತೊಗರಿ ಖದೀದಿಗೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ‘ಸ್ವಂತಕ್ಕೆ ಯಾವ ಆರ್ಥಿಕ ಆಸರೆಯೂ ಇಲ್ಲದೆ ಕುಟುಂಬಕ್ಕೆ ಮತ್ತು ಕೃಷಿಯ ಮೂಲಕ ಸಮಾಜಕ್ಕೆ ದುಡಿಯುತ್ತಿರುವ ಮಹಿಳೆಯರು ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ಮೂಲಕ ಸಂಪೂರ್ಣ ಬೀದಿ ಪಾಲಾಗಲಿದ್ದಾರೆ. ದೇಶದ ಸಂಪತ್ತನ್ನು ಕಾರ್ಪೋರೇಟುಗಳಿಗೆ ಧಾರೆ ಎರೆದಿರುವ ಕೇಂದ್ರ ಸರ್ಕಾರ ಕೃಷಿಯನ್ನೂ ಅವರ ಕೈವಶ ಮಾಡುತ್ತಿರುವುದು ದೇಶಕ್ಕೆ ಎಸಗುವ ದ್ರೋಹವಲ್ಲದೆ ಮತ್ತೇನು? ಈವರೆಗೆ ಹೋರಾಟದಲ್ಲಿ 20 ರೈತರು ಮರಣ ಹೊಂದಿರುವರು. ಆದರೂ ಸರ್ಕಾರ ತನ್ನ ಫ್ಯಾಸಿಸ್ಟ್ ಕ್ರೌರ್ಯದಿಂದ ಹಿಂದೆ ಸರಿಯುತ್ತಿಲ್ಲ. ಇದು ದೇಶ ಕಾಯುವ ಸರ್ಕಾರವಲ್ಲ. ರೈತರನ್ನು ಕೊಂದು ಕಾರ್ಪೋರೇಟುಗಳನ್ನು ಕಾಯುವ ಚೌಕಿದಾರ ಸರ್ಕಾರವಾಗಿದೆ’ ಎಂದು ಟೀಕಿಸಿದರು.