ಚಿತ್ತಾಪುರ: ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಮಳೆ ಬಂದು ಬಿಸಿಲಿನ ತಾಪಕ್ಕೆಸ್ವಲ್ಪ ಕಡಿವಾಣ ಹಾಕಿತು.
ರಾತ್ರಿ 8ರಿಂದ ಬಿರುಗಾಳಿ, ಗುಡುಗು, ಮಿಂಚಿನ ಅಬ್ಬರದೊಂದಿಗೆ ಶುರುವಾದ ಮಳೆ ರಾತ್ರಿ 9.50ರವರೆಗೆ ಮುಂದುವರೆಯಿತು. ಬೇಸಿಗೆಯ ಬಿಸಿಲಿನ ಧಗೆಯಿಂದ ಜನರು ತಂಪು ವಾತಾವರಣ, ತಣ್ಣನೆಯ ಗಾಳಿಯಿಂದ ಸ್ವಲ್ಪ ನಿರಾಳತೆ ಅನುಭವಿಸಿದರು.
ಚಿತ್ತಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ಮಲಕೂಡ, ದಂಡೋತಿ, ಮರಗೋಳ, ಮುಡಬೂಳ, ಭಾಗೋಡಿ, ಕದ್ದರಗಿ, ಯರಗಲ್, ಮೊಗಲಾ, ಇಟಗಾ ಸೇರಿದಂತೆ ವಿವಿಧೆಡೆ ಮಳೆ ಬಂದಿದೆ.
ಮಳೆ ಮತ್ತು ಬಿರುಗಾಳಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.
ಪಡಿತರ ಮೂಲಕ ಸೀಮೆ ಎಣ್ಣೆ ವಿತರಣೆ ಬಂದ್ ಮಾಡಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿ, ಗ್ರಾಮೀಣ ಭಾಗದ ಜನರು ಮನೆಯೊಳಗೆ ಕತ್ತಲೆ ಓಡಿಸಲು ಮೊಬೈಲ್ ಬ್ಯಾಟರಿ ಆನ್ ಮಾಡಿದರು. ಅಡುಗೆ ಎಣ್ಣೆಯ ದೀಪ ಹಚ್ಚಿ ಬೆಳಕಿನ ವ್ಯವಸ್ಥೆ ಮಾಡಿಕೊಂಡರು.