ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯಾಗಿದ್ದರಿಂದ ಮುಲ್ಲಾಮಾರಿ ನದಿಗೆ 377 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದ್ದರಿಂದ ನದಿ ಪಾತ್ರದ ಸುತ್ತ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನದಿ ತೀರದ ಗ್ರಾಮಗಳಾದ ಚಿಮ್ಮನಚೋಡ, ಕನಕಪುರ, ನೀಮಾ ಹೊಸಳ್ಳಿ, ಗೌಡನಹಳ್ಳಿ, ಚಂದಾಪುರ, ಚಿಂಚೋಳಿ, ಪೋಲಕಪಳ್ಳಿ, ಕರ್ಚಖೇಡ್, ಜಟ್ಟೂರು, ಪೋತಂಗಲ್ಮ ಹಲಗೋಡಾ ಮೊದಲಾದ ಕಡೆಗಳಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಹರಿಯಿತು.
ಜಲಾಶಯಕ್ಕೆ 464 ಕ್ಯೂಸೆಕ್ ಒಳ ಹರಿವು ಇರುವುದರಿಂದ ಜಲಾಶಯದ ಒಂದು ಗೇಟನ್ನು ತೆರೆದು ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.ಜಲಾಶಯದ ನೀರಿನ ಮಟ್ಟವನ್ನು 490.90 ಮೀಟರ್ ಕಾಪಾಡಿಕೊಂಡು ಉಳಿದ ನೀರನ್ನು ಬಿಡಲಾಗಿದೆ’ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಎಂಜಿನಿಯರ್ ಹಣಮಂತ ತಿಳಿಸಿದ್ದಾರೆ.
ಮನೆಗೆ ನುಗ್ಗಿದ ನೀರು: ಚಿಂಚೋಳಿ ತಾಲ್ಲೂಕಿನ ದೇಗಲಮಡಿಯಲ್ಲಿ ಭಾರಿ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮದ ಹೊಸ ಬಡಾವಣೆ ಸಿದ್ದೇಶ್ವರ ನಗರ (ಬಡಗ್ಯಾನ ಕಲ್)ದ ನಿವಾಸಿಗಳು ಭಾನುವಾರ ರಾತ್ರಿ ನಿದ್ದೆ ಬಿಟ್ಟು ಜಾಗರಣೆ ನಡೆಸಿದರು.
ಸಿದ್ದೇಶ್ವರ ನಗರದ ಮೇಲ್ಭಾಗದಲ್ಲಿ ಭಾರಿ ಮಳೆಯಾಗಿದೆ. ಬಡಗ್ಯಾನಕಲ್ ನಾಲೆಯಲ್ಲಿ ನೀರು ಹರಿದುಹೋಗದೆ ಸಿದ್ದೇಶ್ವರ ಬಡಾವಣೆ ಮನೆಗಳಿಗೆ ನುಗ್ಗಿದೆ.