ಬಲರಾಮ್ ಚೌಕ್ನಿಂದ ಬಸವನಖಣಿ, ಕಮರವಾಡಿ, ಸೂಲಹಳ್ಳಿ, ಆಲೂರು, ಬೊಮ್ಮನಳ್ಳಿ, ಕರದಳ್ಳಿ ಹಾಗೂ ಆಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ ಹಲವು ವರ್ಷಗಳಿಂದ ಹಾಳಾಗಿತ್ತು. ವಾಹನ ಸವಾರರ ಪಾಲಿಗೆ ನಿತ್ಯ ನರಕ ಸೃಷ್ಟಿಸಿತ್ತು. ಸುಮಾರು 8 ಕಿ.ಮೀ ರಸ್ತೆಯುದ್ದಕ್ಕೂ ಇದ್ದ ತಗ್ಗುಗಳು ವಾಹನ ಸವಾರರ ಪಾಲಿಗೆ ಅಕ್ಷರಶಃ ಪ್ರಾಣಭೀತಿ ಸೃಷ್ಟಿಸಿದ್ದವು. ಆದರೂ ದುರಸ್ತಿ ಮಾಡದೇ ಇರುವುದಕ್ಕೆ ಸ್ಥಳೀಯರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದರು. ಹದಗೆಟ್ಟ ರಸ್ತೆ ಮೇಲಿನ ತಗ್ಗುಗಳಲ್ಲಿ ಗಣಿಯ ನೀರು ಸಂಗ್ರಹಗೊಂಡು ಕಂದಕದ ಆಳ ಅರಿಯದೇ, ಹಲವು ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳೂ ನಡೆದವು.