ಕಲಬುರ್ಗಿ: ‘ನಗರದ ಸಿಟಿ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ₹ 5 ಲಕ್ಷ ನೆರವು ನೀಡುತ್ತೇನೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ಸೋಮವಾರ ನಗರಕ್ಕೆ ಬಂದಿದ್ದ ಸಚಿವರನ್ನು ಭೇಟಿ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಮುಖಂಡರು, ನಗರದಲ್ಲಿರುವ ರಾಯಣ್ಣನ ಪುತ್ಥಳಿ ಜಾಗದ ಅಭಿವೃದ್ಧಿ ಹಾಗೂ ಕಂಚಿನ ಪುತ್ಥಳಿ ನಿರ್ಮಿಸಲು ₹ 50 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ಇದು ನನ್ನ ಕ್ಷೇತ್ರವಲ್ಲದ ಕಾರಣ ಅನುದಾನ ನೀಡಲು ಬರುವುದಿಲ್ಲ. ಹಾಗಾಗಿ, ನನ್ನ ವೈಯಕ್ತಿಕ ಹಣವನ್ನು ನೆರವು ನೀಡುತ್ತೇನೆ. ಸ್ಥಳೀಯ ಶಾಸಕರುಗಳಿಗೆ ಈ ಬಗ್ಗೆ ಮನವರಿಕೆ ಮಾಡುತ್ತೇನೆ’ ಎಂದರು.
ಈ ವೇಳೆ ಸ್ಥಳದಲ್ಲಿದ್ದ ಶಾಸಕ ಬಸವರಾಜ ಮತ್ತಿಮೂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರೂ ತಲಾ ₹ 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ಕೊಟ್ಟರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಅಲಗೂಡ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಜಂಬಗಾ, ಉಪಾಧ್ಯಕ್ಷ ಬೀರು ಬಿದ್ದನೂರ, ಹಿರಿಯ ಉಪಾಧ್ಯಕ್ಷರಾದ ರಮೇಶ ಪೂಜಾರಿ, ಶರಣು ಬೆಲ್ಲೂರ, ಜಗನ್ನಾಥ ನಾಗೂರ ಹಾಗೂ ಮುಖಂಡರು ಇದ್ದರು.