ಕಲಬುರಗಿ: ‘ಶೈಕ್ಷಣಿಕ ಕ್ರಾಂತಿ ಮಾಡಿದ ದೊಡ್ಡಪ್ಪ ಅಪ್ಪ ಅವರು ನಿಜಕ್ಕೂ ಸ್ಮರಣೀಯರು. ಅಂಥವರ ತತ್ವಾದರ್ಶ ಅಳವಡಿಸಿಕೊಳ್ಳುವುದು ಅಗತ್ಯ’ ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಹೇಳಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ಸಪ್ತಾಹದ ಅಂಗವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಸ್ಟಿಸ್ ಶಿವರಾಜ ಪಾಟೀಲ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ‘ವಿಮೋಚನಾ ಹೋರಾಟಗಾರರ ಹೋರಾಟದ ಹಾದಿ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ,‘ಹೋರಾಟಗಾರರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದರು.
ಪತ್ರಕರ್ತ ಶಿವರಂಜನ ಸತ್ಯಂಪೇಟೆ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಅವರು ಪ್ರೇರಣೆಯಾಗಿದ್ದರು’ ಎಂದು ಹೇಳಿದರು.
ರಜಾಕಾರರು ಮಹಾದಾಸೋಹ ಪೀಠದ ಮೇಲೆ ದಾಳಿ ನಡೆಸಿ ಕಳಸ, ನಂದಿ ವಿಗ್ರಹ ಹಾಗೂ ಮೂಲ ವಿಗ್ರಹಕ್ಕೆ ಧಕ್ಕೆ ತಂದಾಗ, ಆಗಿ ಹೋಗಿರುವುದಕ್ಕೆ ಚಿಂತಿಸಿ ಫಲವಿಲ್ಲ. ಎಲ್ಲರ ಭಕ್ತಿ ಒಂದೇ ಎಂದು ನಿಜಾಮ ಅರಸನಿಗೆ ಸನ್ಮಾನ ಮಾಡಿ ಕಳುಹಿಸಿದ ದೊಡ್ಡಪ್ಪ ಅಪ್ಪ ಅವರು ಸೌಹಾರ್ದ ಮೆರೆದಿದ್ದರು ಎಂದು ತಿಳಿಸಿದರು.
ದೊಡ್ಡಪ್ಪ ಅಪ್ಪ ಅವರು 1930ರಲ್ಲಿಯೇ ಶೈಕ್ಷಣಿಕ ಸಂಸ್ಥೆ ಆರಂಭಿಸಿ ಹೆಣ್ಣು ಮಕ್ಕಳ ಶಾಲೆ ತೆರೆದಿದ್ದರು ಎಂದು ಸ್ಮರಿಸಿದರು.
ಸುರೇಶ ಬಡಿಗೇರ, ಬಸವರಾಜ ಯಡ್ರಾಮಿ ಮಾತನಾಡಿದರು.
ಪ್ರಭುಗೌಡ ಪಾಟೀಲ, ಗೋಪಾಲ ನಾಟೀಕಾರ, ಮನೋಹರ ಬೀರನೂರ ಹಾಗೂ ಆನಂದ ಕಪನೂರ ಇದ್ದರು. ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.