ಶಹಾಬಾದ್: ‘ಸೇವಾಲಾಲ್ ಮಹಾರಾಜರು ಅವರ ಸಿದ್ಧಾಂತಗಳು, ಸಮಾಜ ಸುಧಾರಣೆಯ ಕೊಡುಗೆಗಳ ಮೂಲಕ ಜೀವಂತವಾಗಿ ಇದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ನಗರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೇವಾಲಾಲ್ ಮಹಾರಾಜರು ಬಂಜಾರಾ ಸಮಾಜದ ಏಳಿಗೆಗೆ ಶ್ರಮಪಟ್ಟ ಗುರುಗಳು. ಅವರ ಆದರ್ಶದ ತಳಹದಿಯಲ್ಲೇ ಬಂಜಾರಾ ಸಮಾಜ ಸಂಘಟಿತವಾಗಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಬಂಜಾರಾ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಗೊಳ್ಳಬೇಕಾಗಿದೆ. ಆದ್ದರಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಒದಗಿಸುವ ಅಗತ್ಯವಿದೆ’ ಎಂದರು.
ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಮಾತನಾಡಿ, ‘ದೇಶದಲ್ಲಿ ಅಪಾರ ಜನಸಂಖ್ಯೆ ಹೊಂದಿದ ಬಂಜಾರಾ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು’ ಎಂದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ, ಸದಸ್ಯರಾದ ರವಿ ರಾಠೋಡ, ಸಾಬೇರಾ ಬೇಗಂ, ಪಾರ್ವತಿ ಪವಾರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರ ಚವ್ಹಾಣ, ಶರಣು ಪಗಲಾಪೂರ್, ಡಾ.ರಶೀದ್ ಮರ್ಚಂಟ್, ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಇದ್ದರು.