ಚಿಂಚೋಳಿ: ತಾಲ್ಲೂಕಿನ ಶೇರಿಭಿಕನಳ್ಳಿ ಸ್ಥಳಾಂತರಿಸುವ ಸಂಬಂಧ ಶುಕ್ರವಾರ ತಾಂಡಾಕ್ಕೆ ತಹಶೀಲ್ದಾರ್ ಅಂಜುಮ ತಬಸ್ಸುಮ ಭೇಟಿ ನೀಡಿ ಪರಿಶೀಲಿಸಿದರು.
ಕುಂಚಾವರಂ ವನ್ಯಜೀವಿಧಾಮದ ಹೃದಯ ಭಾಗದಲ್ಲಿರುವ ಶೇರಿಭಿಕನಳ್ಳಿ ಕಾಡಿನ ಮಧ್ಯದಲ್ಲಿದೆ. ಹಾಗಾಗಿ ಅಲ್ಲಿಗೆ ಹೋಗಿ ಬರಲು ರಸ್ತೆ, ಸಾರಿಗೆ ಮತ್ತು ವಿದ್ಯುತ್ ಸೌಲಭ್ಯಗಳಿಲ್ಲ. ಇದರಿಂದ ಈ ತಾಂಡಾವನ್ನು ಸ್ಥಳಾಂತರಿಸಿ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸುವ ಬೇಡಿಕೆ ಈವರೆಗೂ ಈಡೇರಿಲ್ಲ.
ಇಲ್ಲಿನ ವಾಸ್ತವಿಕ ಮಾಹಿತಿ ಕಲೆ ಹಾಕಲು ಇಲ್ಲಿಗೆ ಭೇಟಿ ನೀಡಿದ ತಹಶೀಲ್ದಾರ್ ಅಂಜುಮ ತಬಸ್ಸುಮ ಅವರು, ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹಿಸಿದರು. ಜತೆಗೆ ಸ್ಥಳಿಯರ ಕುಂದುಕೊರತೆಗಳು, ಬೇಡಿಕೆಗಳ ಬಗೆಗೂ ಅವರು ಮಾಹಿತಿ ಪಡೆದರು.
ಇಲ್ಲಿರುವ ಜನಸಂಖ್ಯೆ, ಕುಟುಂಬಗಳು, ಪಟ್ಟಾ ಜಮೀನು ಹಾಗೂ ಅನಧಿಕೃತ ಸಾಗುವಳಿದಾರರು ಹೀಗೆ ಎಲ್ಲಾ ಮಾಹಿತಿ ಪಡೆದ ತಹಶೀಲ್ದಾರ್ ಚಿಂಚೋಳಿಗೆ ಮರಳಿದರು. ಅವರೊಂದಿಗೆ ಕಂದಾಯ ನಿರೀಕ್ಷಕ ರವಿ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಅಮೀರಬಾಬಾ, ಮೊಗ್ದುಮ್ಇದ್ದರು.