ಕಮಲಾಪುರ: ತಾಲ್ಲೂಕಿನ ಮಡಕಿ ಗ್ರಾಮದಲ್ಲಿ ಬುಧವಾರ ಹಾವು ಕಚ್ಚಿದ ಪರಿಣಾಮ ಆಶಾ ಕಾರ್ಯಕರ್ತೆ ಮಂಜುಳಾ ಚಿತಂಬರಾಯ (38) ಎಂಬುವರು ಮೃತಪಟ್ಟಿದ್ದಾರೆ. ತಂದೆಯ ಜೊತೆ ಜಮೀನಿಗೆ ಹೋಗಿದ್ದ ವೇಳೆ ಘಟನೆ ನಡೆದಿದ್ದು, ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು.
ಆಳಂದ ತಾಲ್ಲೂಕಿನ ಕರಹರಿ ಗ್ರಾಮದ ಚಿತಂಬರಾಯ ಎಂಬುವರೊಂದಿಗೆ ಮಂಜುಳಾ ಅವರ ವಿವಾಹವಾಗಿತ್ತು. ಅವರಿಗೆ ತಂದೆ, ತಾಯಿ, ಪತಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಗುರುವಾರ ಮಡಕಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.