ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಇನ್ನೂ ಬಂದಿಲ್ಲ. ಆದರೆ ಕೆ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ವಿ.ವಿ. ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
‘ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಕೊರೊನಾ ಪ್ರಯುಕ್ತ ವಿ.ವಿ. ಪರೀಕ್ಷೆಗಳು ತಡವಾಗಿ ನಡೆದಿದ್ದು, ಫಲಿತಾಂಶವೂ ವಿಳಂಬವಾಗಿ ಬರುವ ಸಾಧ್ಯತೆ ಇದೆ. ಹೀಗಾಗಿ, ನೇಮಕಾತಿ ಪರೀಕ್ಷೆಗೆ ಅವಕಾಶ ನೀಡಬೇಕು. 2019ರಲ್ಲಿ ಬಿ.ಇಡಿ. ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈಗಲೂ ಉನ್ನತ ಶಿಕ್ಷಣ ಸಚಿವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು‘ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
‘ಫಲಿತಾಂಶವನ್ನು ಆದ್ಯತೆಯ ಮೇರೆಗೆ ತಕ್ಷಣ ಪ್ರಕಟಿಸಬೇಕು’ ಎಂದು ಕೋರಿ ಗುಲಬರ್ಗಾ ವಿ.ವಿ. ಮೌಲ್ಯಮಾಪನ ವಿಭಾಗದ ಕುಲಸಚಿವ ಸೋನರ ನಂದಪ್ಪ ಡಿ. ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಾದ ಹಣಮಂತ ಎಸ್. ಪಗಡೆ, ಶ್ರೀಶೈಲ ಪೂಜಾರಿ, ಶಿವಾಜಿ, ಹೊನ್ನಪ್ಪ, ಗೋಪಾಲಕೃಷ್ಣ, ಸುಭಾಷ್, ಸೋಮಣ್ಣ ಎಸ್, ರಮೇಶ, ರಾಯಪ್ಪ, ಪ್ರಕಾಶ ಇದ್ದರು.