ಕಲಬುರ್ಗಿ: ಕೊರೊನಾ ಸೋಂಕು ಹರಡುತ್ತಿರುವ ಕಾರಣ ಸುರಕ್ಷತೆ ಹಿತದೃಷ್ಟಿಯಿಂದ ಸುಗಮವಾಗಿ ನ್ಯಾಯಾಲಯದ ಕಲಾಪ ನಡೆಸಲು ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ವರ್ಚುವಲ್ ನ್ಯಾಯಾಲಯ ಕೇಂದ್ರವನ್ನು ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಜಿ.ನರೇಂದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಕಾರಣ ಎಲ್ಲರ ಹಿತದೃಷ್ಟಿಯಿಂದ ವರ್ಚುವಲ್ ನ್ಯಾಯಾಲಯ ಕೇಂದ್ರವನ್ನು ಸ್ಥಾಪಿಸಿದ್ದು, ಅದರ ಕಾರ್ಯವಿಧಾನ ಮತ್ತು ಪ್ರಯೋಜನವನ್ನು ವಕೀಲರು ಸೇರಿದಂತೆ ಎಲ್ಲರೂ ಅರಿತುಕೊಳ್ಳಬೇಕು’ ಎಂದರು.
‘ಮೂರು ದಿನಗಳ ಕಂಪ್ಯೂಟರ್ ತರಬೇತಿಯನ್ನು ವಕೀಲರು ಸದ್ಬಳಕೆ ಮಾಡಿಕೊಳ್ಳಬೇಕು. ಕಂಪ್ಯೂಟರ್ ಮೂಲಕ ಪ್ರಕರಣ ದಾಖಲಿಸುವ ಮತ್ತು ನಡೆಸುವ ಕುರಿತು ತರಬೇತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದೇ ಪ್ರಕ್ರಿಯೆ ತುಂಬಾ ಉಪಯುಕ್ತವಾಗಿದೆ’ ಎಂದರು.
ನ್ಯಾಯಮೂರ್ತಿ ಪಿ.ಎನ್. ದೇಸಾಯಿ, ಜಿಲ್ಲಾಧಿಕಾರಿ ಶರತ್.ಬಿ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಕಲಬುರ್ಗಿ ಜಿಲ್ಲಾ ಪ್ರಭಾರಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಕಿಣ್ಣಿ, ವಕೀಲ ನಂದಕಿಶೋರ ಇದ್ದರು.