ಚಿಂಚೋಳಿ: ಪಟ್ಟಣದ ಸಿ.ಬಿ. ಪಾಟೀಲ ಕಾಲೇಜಿನಲ್ಲಿ ಸೋಮವಾರ ‘ಕ್ಷಯರೋಗ ಸೋಲಿಸಿ ಕರ್ನಾಟಕ ಗೆಲ್ಲಿಸಿ’ ಅಭಿಯಾನ ನಡೆಯಿತು.
ಮಕ್ಕಳಲ್ಲಿ ಕ್ಷಯರೋಗದ (ಟಿಬಿ) ಲಕ್ಷಣಗಳು ಕಂಡು ಬಂದರೆ, ಅವರು ಕ್ಷಯರೋಗ ಪರೀಕ್ಷೆಗೆ ಒಳಪಡುವಂತೆ ತಿಳಿಸಬೇಕು. ಇದೊಂದು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಭಯ ಪಡುವ ಅಗತ್ಯವಿಲ್ಲ ಎಂದು ಡಾಟ್ಸ್ ಪ್ಲಸ್ ಮೇಲ್ವಿಚಾರಕ ಸುರೇಶ ದೊಡ್ಡಮನಿ ತಿಳಿಸಿದರು.
ಅಭಿಯಾನದ ಯಶಸ್ಸಿಗೆ ವಿದ್ಯಾರ್ಥಿಗಳು ಕೈಜೋಡಿಸಬೇಕು. ಸಮುದಾಯದ ಜನರಲ್ಲಿ ರೋಗ ಲಕ್ಷಣ ಕುರಿತು ಅರಿವು ಮೂಡಿಸಿದರೆ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಎಂದರು.
ಜಿಲ್ಲಾ ಕ್ಷಯರೋಗ ಡಿಆರ್ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತಹ ರೋಗವಾಗಿದೆ. ಇದರ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. 6 ತಿಂಗಳ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ತಿಂಗಳಿಗೆ ₹ 500 ಕೊಡಲಾಗುತ್ತದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕ್ಷಯರೋಗ ನಿರ್ಮೂಲನ ಕೇಂದ್ರದ ತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ದಿನೇಶ್ ವಾಡೆಕರ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯತು.
ವಿದ್ಯಾರ್ಥಿ ಉಷಾ ಪ್ರಾಥನಾ ಗೀತೆ ಗಾಡಿದರು. ಕಾಶಿನಾಥ ನಿರೂಪಿಸಿದರು. ವೀರಯ್ಯ ಸ್ವಾಮಿ ವಂದಿಸಿದರು. ಉಪನ್ಯಾಸಕರಾದ ರೂಪಕಲಾ ನಾಲವಾರ್, ಗೀತಾ, ಪರಮೇಶ್ವರ, ಗುರುನಾಥ ವಾಲಿಕರ್, ಪ್ರೊ.ಸುನೀತಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.