ಕಲಬುರ್ಗಿ: ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಆರೋಪ ಸಾಬೀತಾಗಿದ್ದರಿಂದ ಚಿತ್ತಾಪುರ ತಾಲ್ಲೂಕು ರಾವೂರ ಗ್ರಾಮದ ಮಲ್ಲಿಕಾರ್ಜುನ ಬೊಮ್ಮನ್ ಎಂಬಾತನಿಗೆ ಇಲ್ಲಿನ ಪ್ರಧಾನಸಿಜೆಮತ್ತು ಜೆಎಂಎಫ್ ನ್ಯಾಯಾಲಯವು ಒಂದೂವರೆ ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.
18 ಜೂನ್ 2019ರಂದು ಇಲ್ಲಿನ ಪೊಲೀಸ್ ಕಮಿಷನರ್ ಕಚೇರಿ ಪಕ್ಕದ ಕ್ವಾರ್ಟರ್ಸ್ ಬಳಿ ವಿಜಯಲಕ್ಷ್ಮಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಕೊರಳಲ್ಲಿದ್ದ ಚಿನ್ನದ ಚೈನ್ ಕಳ್ಳತನ ಮಾಡಿಕೊಂಡು ಹೋಗಿದ್ದ. ಅವರ ಜೊತೆಯಲ್ಲಿದ್ದ ಕಮಲಾ ಎಂಬುವವರು ಸಾಕ್ಷ್ಯ ಹೇಳಿದ್ದರು.
ಸ್ಟೇಶನ್ ಬಜಾರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಲ್.ಎಚ್.ಗೌಂಡಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಶ್ರೀವಾಸ್ತವ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ರಾಜಕುಮಾರ ಜಮಾದಾರ ವಾದ ಮಂಡಿಸಿದ್ದರು.