ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಕುರಿಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳರ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಕಡಬೂರು ಗ್ರಾಮದ ನಿವಾಸಿ ರಾಚಯ್ಯಸ್ವಾಮಿ, ಕಲಬುರ್ಗಿಯ ನ್ಯೂರಾಘವೇಂದ್ರ ಕಾಲೊನಿ ನಿವಾಸಿ ಕೈಲಾಸ ಬಸವರಾಜ ಜಮಾದಾರ, ಕಲಬುರ್ಗಿಯ ಮಾಣಿಕೇಶ್ವರಿ ಕಾಲೊನಿ ನಿವಾಸಿ ಅಂಬರೀಶ ಸಿದ್ದರಾಮ ಜಮಾದಾರ ಹಾಗೂ ನಾಗನಹಳ್ಳಿ ಗ್ರಾಮದ ನಿವಾಸಿ ರಿತೇಶ ಬಂಧಿತ ಆರೋಪಿಗಳು.
ಮಂಗಳವಾರ ಬೆಳಿಗ್ಗೆ ಪಿಎಸ್ಐ ವಿಜಯಕುಮಾರ ಭಾವಗಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಸಿಬ್ಬಂದಿ ಚೆನ್ನಮಲ್ಲಪ್ಪ ಪಾಟೀಲ, ಲಕ್ಷ್ಮಣ ತಳಕೇರಿ, ಬಸವರಾಜ, ರಮಣಯ್ಯ, ದತ್ತಾತ್ರೇಯ ಜಾನೆ, ದೊಡ್ಡಪ್ಪ ಪೂಜಾರಿ ತಂಡದಲ್ಲಿ ಇದ್ದರು.
ಘಟನೆ ವಿವರ: ಕುರಿಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಸಮಯದಲ್ಲಿ ನ.12ರಂದು ಕುರಿ ಮಾಲೀಕನ ಕೈಗೆ ಸಿಕ್ಕು ನಂತರ ಲಾಡ್ಲಾಪುರ ಗ್ರಾಮಸ್ಥರಿಂದ ಥಳಿತಕ್ಕೊಳಗಾಗಿದ್ದ ಕಡಬೂರು ನಿವಾಸಿ ರಾಚಯ್ಯ ಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಜತೆ ಕಳ್ಳತನದಲ್ಲಿ ಭಾಗಿಯಾಗಿದ್ದ ಉಳಿದ ಮೂವರು ಆರೋಪಿಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಲಾಡ್ಲಾಪುರ ನಿವಾಸಿ ಗುಲಾಂ ಅವರ ದೊಡ್ಡಿಯಿಂದ 10 ಕುರಿಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.