ಚಿಂಚೋಳಿ: ತಾಲ್ಲೂಕಿನಲ್ಲಿ 275 ಹೆಕ್ಟೇರ್ನಲ್ಲಿ ರೈತರು ಅರಿಸಿನ ಕೃಷಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಉತ್ತಮ ಧಾರಣೆ ಸಿಗದೆ ಕಂಗಾಲಾಗಿದ್ದರು. ಈ ಬಾರಿ ಪ್ರತಿ ಕ್ವಿಂಟಲ್ ಅರಿಸಿನವು ₹ 16 ಸಾವಿರಕ್ಕೆ ಮಾರಾಟವಾಗುತ್ತಿದೆ.
ಸೇಲಂ ತಳಿಯ ಅರಿಸಿನವನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಜ್ಯದ ಮಹಾಲಿಂಗಪುರ, ತೆಲಂಗಾಣದ ಸದಾಶಿವಪೇಟ ಮತ್ತು ಮಹಾರಾಷ್ಟ್ರದ ಸಾಂಗ್ಲಿಗೆ ಇಲ್ಲಿನ ರೈತರು ಅರಿಸಿನ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.
‘20 ವರ್ಷದಿಂದ ಅರಿಸಿನ ಬೆಳೆಯುತ್ತಿದ್ದೇನೆ. ಕಳೆದ ಐದಾರು ವರ್ಷಗಳಿಂದ ಕ್ವಿಂಟಲ್ಗೆ ಕೇವಲ ₹6 ಸಾವಿರ ದರ ಲಭಿಸಿತ್ತು. ಪ್ರಸಕ್ತ ವರ್ಷ ಧಾರಣೆಯು ಮೂರು ಪಟ್ಟು ಹೆಚ್ಚಾಗಿದೆ’ ಎಂದು ಅರಿಸಿನ ಬೆಳೆಗಾರ ಮಸ್ತಾನ್ ಗಾರಂಪಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರಿಸಿನ ಬೇಸಾಯದ ನಿರ್ವಹಣೆ ಮತ್ತು ಸಂಸ್ಕರಣೆಗಾಗಿ ಪ್ರತಿ ಎಕರೆಗೆ ಕನಿಷ್ಠ ₹80 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ನಮ್ಮಲ್ಲಿ ಮಾರುಕಟ್ಟೆ ಇಲ್ಲದ ಕಾರಣ ನಾವು ದಲ್ಲಾಳಿಗಳಿಗೆ ಮಾರಾಟ ಮಾಡುತ್ತೇವೆ. ಇಲ್ಲಯೇ ಮಾರುಕಟ್ಟೆ ಸ್ಥಾಪಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.