ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: 317 ಮಂದಿಗೆ ಲಸಿಕೆ

ಅಗತ್ಯ ಸೇವಾ ವಲಯದ ಸಿಬ್ಬಂದಿ, ಹಮಾಲರಿಗೆ ಸೇರಿ ಇತರರಿಗೆ ಆದ್ಯತೆ
Last Updated 1 ಜೂನ್ 2021, 1:13 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಸೋಮವಾರ ಕೊರೊನಾ ವಾರಿಯರ್‌ ಎಂದು ಪರಿಗಣಿಸಿದ 317 ಮಂದಿಗೆ ಕೋವಿಡ್‌ ಲಸಿಕೆ ಹಾಕಲಾಯಿತು.

ಎಪಿಎಂಸಿ ಅಧಿಕಾರಿಗಳು, ಸಿಬ್ಬಂದಿ, ಕೆಲಸಗಾರರು, ಪೇಟೆ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಹಮಾಲರು, ವಾಹನ ಚಾಲಕರು, ತೂಕದವರು ಸೇರಿದಂತೆ ಎಲ್ಲ ಫಲಾನುಭವಿಗಳಿಗೂ ಲಸಿಕೆಗಾಗಿ ನೋಂದಣಿ ಮಾಡಿಸಲಾಗಿದೆ. ಎಲ್ಲರಿಗೂ ಕೋವಿಶೀಲ್ಡ್‌ ಚುಚ್ಚುಮದ್ದು ನೀಡಲಾಯಿತು. ಅರ್ಧ ತಾಸು ಪ್ರಾಂಗಣದ ಕೊಠಡಿಯಲ್ಲಿ ವಿಶ್ರಾಂತಿ ನೀಡಿದ ಬಳಿಕ ಮನೆಗೆ ಕಳುಹಿಸಲಾಯಿತು.

ಲಸಿಕಾ ಉತ್ಸವಕ್ಕೆ ಚಾಲನೆ ನೀಡಿದ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಮಾತನಾಡಿ, ‘ಸರ್ಕಾರದ ಮೇಲೆ ಹೆಚ್ಚು ಅವಲಂಬನೆ ಮಾಡುವುದಕ್ಕಿಂತ ನಮ್ಮ ಸುರಕ್ಷತೆ ಬಗ್ಗೆ ನಾವೇ ಎಚ್ಚರಿಕೆ ವಹಿಸಬೇಕು. ಎಪಿಎಂಸಿ ಪ್ರಾಂಗಣದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಎಷ್ಟೇ ಹತ್ತಿರದ ಸ್ನೇಹಿತ, ಸಹೋದ್ಯೋಗಿ, ಸಂಬಂಧಿ ಇದ್ದರೂ ಕನಿಷ್ಠ ಅಂತರ ಕಾಪಾಡಿಕೊಂಡೇ ವ್ಯವಹರಿಸಬೇಕು. ಪದೇಪದೇ ಕೈ ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಮುಂಜಾಗ್ರತೆ ವಹಿಸಿದರೆ ಮಾತ್ರ ಕೊರೊನಾದಿಂದ ದೂರ ಇರಬಹುದು’ ಎಂದರು.

ಕಾರ್ಯದರ್ಶಿ ಎಂ.ವಿ. ಶೈಲಜಾ ಮಾತನಾಡಿ, ‘ಅಗತ್ಯ ಸೇವಾ ವಲಯದಲ್ಲಿ ಬರುವ ಕಾರಣ ಜಿಲ್ಲಾಡಳಿತವು ಎಪಿಎಂಸಿ ಸಿಬ್ಬಂದಿ ಹಾಗೂ ಕೆಲಸಗಾರರನ್ನು ಕೊರೊನಾ ವಾರಿಯರ್‌ ಎಂದು ಗುರುತಿಸಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ಎಲ್ಲ ಫಲಾನುಭವಿಗಳಿಗೆ ಚುಚ್ಚುಮದ್ದು ಕೊಡಿಸಿದ್ದೇವೆ’ ಎಂದರು.‌

‘ಲಾಕ್‌ಡೌನ್‌ ನಿಯಮಗಳನ್ನು ಕೂಡ ಪ್ರಾಂಗಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವ ಯತ್ನಗಳು ನಡೆದಿವೆ. ಸಂಪೂರ್ಣ ಲಾಕ್‌ಡೌನ್‌ ಇದ್ದ ವೇಳೆ ಎಲ್ಲ ವ್ಯವಹಾರಗಳು ಬಂದ್‌ ಇರುತ್ತವೆ. ಉಳಿದ ದಿನ ಬೆಳಿಗ್ಗೆ ಅವಕಾಶ ನೀಡಿದ್ದರಿಂದ ಅಂಗಡಿಗಳ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಅಂತರ ಕಾಯ್ದುಕೊಂಡೇ ವ್ಯವಹರಿಸುವಂತೆ ಸೂಚಿಸಿದ್ದೇವೆ. ಅಲ್ಲದೇ, ಪ್ರತಿದಿನವೂ ಮೈಕ್‌ನಲ್ಲಿ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ’ ಎಂದರು.

ಎಪಿಎಂಸಿ ಉಪಾಧ್ಯಕ್ಷ ರಾಜು ಕೋಟೆ, ಸಹಾಯಕ ಕಾರ್ಯದರ್ಶಿ ರಾಜಕುಮಾರ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT