ಕಲಬುರಗಿ: ನಾಡಿನ ಮತ್ತು ಕನ್ನಡಿಗರ ಹಿತರಕ್ಷಣೆಗಾಗಿ ಡಾ.ಸರೋಜಿನಿ ಮಹಿಷಿ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸೇನೆ ಅಧ್ಯಕ್ಷ ಅಮೃತ ಸಿ.ಪಾಟೀಲ, ‘ಸರೋಜಿನಿ ಮಹಿಷಿ ವರದಿ ಕನ್ನಡಿಗರ ಅನ್ನದ ಪ್ರಶ್ನೆಯಾಗಿದೆ. ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು’ ಎಂದರು.
‘ಸರೋಜಿನಿ ಮಹಿಷಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ದಶಕಗಳು ಕಳೆದರೂ ಈವರೆಗೂ ಅನುಷ್ಠಾನವಾಗಿಲ್ಲ. ಈವರೆಗೂ ಆಡಳಿತ ನಡೆಸಿದ ಸರ್ಕಾರಗಳು ನಾಡಿನ ಜನರಿಗೆ ಮಾಡಿದ ದ್ರೋಹವಾಗಿದೆ’ ಎಂದು ಅವರು ಟೀಕಿಸಿದರು.
‘1989ರಲ್ಲಿ ಸಲ್ಲಿಕೆಯಾದ ವರದಿಯಲ್ಲಿ 58 ಶಿಫಾರಸುಗಳಿದ್ದವು. ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸದೇ ಅದರಲ್ಲಿನ 12 ಶಿಫಾರಸುಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ಸರ್ಕಾರ ತನ್ನ ಉದ್ದೇಶ ಏನು ಎಂಬುದನ್ನು ಜನರಿಗೆ ತಿಳಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಉದ್ಯಮಗಳ ಎಲ್ಲ ಹಂತಗಳ ಹುದ್ದೆಗಳಿಗೆ ಶೇ 100ರಷ್ಟು ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ, ಬಹುರಾಷ್ಟ್ರೀಯ ಕಂಪನಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಮ ನ್ನ ಣೆ ನೀ ಡು ತ್ತಿ ಲ್ಲ. ಕನ್ನಡಿಗರನ್ನು ದೂರ ತಳ್ಳಿ ನೆರೆಯ ರಾಜ್ಯಗಳ ಯುವಕರಿಗೆ ಉದ್ಯೋಗ ಕಲ್ಪಿಸುತ್ತಿವೆ ಎಂದು ಅವರು ದೂರಿದರು.
ಸರೋಜಿನಿ ಮಹಿಷಿ ವರದಿಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ಜಾರಿಗೊಳಿಸದಿದ್ದರೆ, ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಅಮೃತ ಸಿ.ಪಾಟೀಲ, ಅನಿಲ ತಳವಾರ, ರಜನಿಕಾಂತ ಭೂವಿ, ರವಿ ಒಂಟಿ, ಸಿದ್ದು ಕಂದಗಲ, ಹಣಮಂತ ಬಜಂತ್ರಿ, ಶಿವಾನಂದ ಚಿಕ್ಕಾಣಿ, ಸಂಗಮನಾಥ ಗೌಡ, ಯುವರಾಜ ಮಠಪತಿ, ಅಶೋಕ ವಾಡೆಕರ್, ಮಹಿಬೂಬ್ ಮಂಗಲಗಿ ಇದ್ದರು.