ಕಲಬುರಗಿ: ಹತ್ತನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಜುಲೈ 29 ಮತ್ತು 30ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಎಚ್.ಟಿ. ಪೋತೆ ಸಮ್ಮೇಳನದ ಅಕ್ಷರಾಗಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದರು.
‘ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ದಲಿತ ಸಾಹಿತ್ಯ ಪರಿಷತ್, ‘ಪ್ರಬುದ್ಧ ಭಾರತ’ ಎಂಬ ಆಶಯದಲ್ಲಿ ಸಮ್ಮೇಳನ ನಡೆಸಲಿದೆ. ವಿವಿಧ ಗೋಷ್ಠಿ, ಉಪನ್ಯಾಸ, ಸಂವಾದ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇದು ಜಾತಿ ಸಮ್ಮೇಳನವಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಡಾ. ಎಚ್.ಟಿ. ಪೋತೆ ಅವರು ಕನ್ನಡ ಹಾಗೂ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಸಾಹಿತಿ. ಗೌತಮ ಬುದ್ಧ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಅಧಿಕೃತವಾಗಿ ಮಾತನಾಡುವ ಚಿಂತಕ ಮತ್ತು ಜಾನಪದ ವಿದ್ವಾಂಸರಾಗಿದ್ದಾರೆ. ಈ ಕಾರಣ ದಲಿತ ಹಾಗೂ ದಲಿತಪರ ಸಾಹಿತಿ-ಸಂಘಟಕರ ಅಭಿಪ್ರಾಯ ಪಡೆದು ಡಾ.ಪೋತೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದರು.
ಸಮ್ಮೇಳನದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ‘ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್.ದೊಡ್ಡೇಗೌಡ ಬೆಂಗಳೂರು, ವೀರಹನುಮಾನ ರಾಯಚೂರು, ಡಾ.ಗವಿಸಿದ್ದಪ್ಪ ಪಾಟೀಲ ಬೀದರ್, ಶ್ರೀಶೈಲ ನಾಗರಾಳ ಕಲಬುರಗಿ, ಮುರ್ತುಜಾ ಬೇಗಂ ಇಲಕಲ್ಲ, ಹಾರೋಹಳ್ಳಿ ರವೀಂದ್ರ ಮೈಸೂರು, ಪರಶುರಾಮ ಶಿವಶರಣ ವಿಜಯಪುರ, ನರೇಂದ್ರ ನಾಗವಾಲ ಮೈಸೂರು, ಮುಳ್ಳೂರ ಶಿವಮಲ್ಲು ಚಾಮರಾಜನಗರ, ಡಾ.ಸಂಜೀವಕುಮಾರ ಮಾಲಗತ್ತಿ, ಸೌಜನ್ಯ ಕರಡೋಣಿ ಧಾರವಾಡ, ರಾಜು ವಿಜಯಪುರ ಹುಬ್ಬಳ್ಳಿ, ಸಿ.ಆರ್.ನಟರಾಜ ಕೋಲಾರ, ದೇವು ಕೆ.ಅಂಬಿಗ ಅವರು ಆಯ್ಕೆಯಾಗಿದ್ದಾರೆ ಎಂದರು.
‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ಗೆ ಬಿದಲೋಟಿ ರಂಗನಾಥ್, ಡಾ.ಸದಾಶಿವ ದೊಡಮನಿ, ಡಾ.ಶಾಂತನಾಯ್ಕ ಶಿರಗಾನಹಳ್ಳಿ, ರೇಣುಕಾ ಹೆಳವರ, ಪಿ.ಆರಡಿ ಮಲ್ಲಯ್ಯ ಕಟ್ಟೇರ, ಡಾ.ಪ್ರಸನ್ನ ನಂಚಾಪುರ, ಡಾ.ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ.ಎಚ್.ಡಿ. ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ.ಎಂ.ಬಿ.ಕಟ್ಟಿ, ಡಾ.ಹೊಂಬಯ್ಯ ಹೊನ್ನಲಗೆರೆ, ಡಾ.ಅಮರೇಶ ಯತಗಲ್, ಡಾ.ಪೂರ್ಣಿಮಾ ಧಾಮಣ್ಣವರ, ರಾಯಸಾಬ ದರ್ಗಾದವರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
‘ಸಾಧಕಶ್ರೀ ಪ್ರಶಸ್ತಿ’ಯನ್ನು ಪರಿಷತ್ ವಿಭಾಗೀಯ ಸಂಯೋಜಕ ಗಣಪತಿ ಚಲವಾದಿ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ಮರ್ಚಟಹಾಳ, ಸಿಂಧನೂರು ತಾಲ್ಲೂಕು ಅಧ್ಯಕ್ಷ ಹುಸೇನಪ್ಪ ಅಮರಾಪುರ ಅವರಿಗೆ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಪರಿಷತ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹೊದ್ಲೂರ, ಉಪಾಧ್ಯಕ್ಷ ವೈ.ಎಂ.ಭಜಂತ್ರಿ, ಖಜಾಂಚಿ ಎಚ್.ಬಿ.ಕೋಲ್ಕಾರ್, ಬೆಳಗಾವಿ ವಿಭಾಗೀಯ ಸಂಯೋಜಕಿ ಡಾ. ಸುಜಾತಾ ಛಲವಾದಿ, ವಿಜಯಪುರ ಅಧ್ಯಕ್ಷ ಬಸವರಾಜ ಜಾಲವಾದಿ, ಕಲಬುರಗಿ ವಿಭಾಗೀಯ ಸಂಯೋಜಕ ಡಾ. ಗಾಂಧೀಜಿ ಮೊಳಕೇರಿ, ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸುನೀಲ ಜಾಬಾದಿ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಪೀರಪ್ಪ ಸಜ್ಜನ್, ಸಾಹಿತಿ ಅನೀಲ ಹೊಸಮನಿ, ಸಮ್ಮೇಳನದ ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.