ಶಕ್ತಿನಗರ: ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ನಳದಿಂದ ನೀರಿನ ಸಂಪರ್ಕ ಒದಗಿಸಲಾಗುವುದು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ಗ್ರಾಮೀಣ ಕುಡಿಯುವ ನೀರಿನ ಇಲಾಖೆ ವತಿಯಿಂದ ₹ 1.45 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಕುಡಿಯುವ ನೀರಿನ ಪೈಪ್ಲೈನ್ ಮತ್ತು ಪ್ರತಿ ಮನೆಗೆ ವೈಯಕ್ತಿಕ ನಳಗಳ ಸಂಪರ್ಕ ನೀಡುವ ಕಾಮಗಾರಿಗೆ ಸೋಮವಾರ ಗುಂಜಳ್ಳಿ ಗ್ರಾಮದಲ್ಲಿ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಪ್ರತಿ ವರ್ಷವೂ ಎದುರಾಗುವ ಜಲಕ್ಷಾಮ ನೀಗಿಸಲು, ಅಂತರ್ಜಲ ಮಟ್ಟ ವೃದ್ಧಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಅನವಶ್ಯಕವಾಗಿ ನೀರು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯ ಯೋಜನೆ ಅಡಿಯಲ್ಲಿ ₹ 1 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹ ಮತ್ತು ಹಂಚಿನಾಳ ಗ್ರಾಮದಲ್ಲಿ ₹ 14 ಲಕ್ಷ ವೆಚ್ಚದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಅವರು ಚಾಲನೆ ನೀಡಿದರು.
ಮುಖಂಡರಾದ ಶರತ್ರೆಡ್ಡಿ, ಹರಿಶಚಂದ್ರರೆಡ್ಡಿ , ಶ್ರೀನಿವಾಸ, ದಶರಥರೆಡ್ಡಿ, ಮಲ್ಲಿಕಾರ್ಜುನಗೌಡ, ಸತ್ಯರೆಡ್ಡಿ , ಕಿಶೋರಕುಮಾರ, ಜನಾರ್ಧನಗೌಡ, ಕರಿಯಪ್ಪ ಮತ್ತು ಇಲಾಖೆಯ ಅಧಿಕಾರಿಗಳು ಇದ್ದರು.