ಕಮಲಾಪುರ (ಕಲಬುರಗಿ ಜಿಲ್ಲೆ): ಕಮಲಾಪುರ ತಾಲ್ಲೂಕಿನ ಪಟವಾದ ಗ್ರಾಮದ ಬಳಿಯ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಕುಡಿದ ಮತ್ತಿನಲ್ಲಿ ಈಜಲು ಹೋಗಿ ತೆಲಂಗಾಣ ಮೂಲದ ಯುವಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೈದರಾಬಾದ್ನ ಜಹಂಗೀರಾಬಾದ್ ಸಮೀಪದ ಬಂದಲಗೂಡಾ ನಿವಾಸಿ ಮೊಹಮ್ಮದ್ ಸಾಜೀದ್ ದಸ್ತಗೀರ್ (25) ಮೃತ ಯುವಕ.
ಮೇ 19ರಂದು ಮೃತ ಸಾಜೀದ್ ತನ್ನ ಸ್ನೇಹಿತರಾದ ಸೈಯದ್ ವಾಜೀದ್, ಮೊಹಮ್ಮದ್ ಅಫ್ರೋಜ್, ತಾಜ್ಜುದೀನ್ ಹಾಗೂ ಸೈಯದ್ ಸಮೀರ್ ಜೊತೆ ಸೇರಿ ಆಟೊದಲ್ಲಿ ಚಿಟಗುಪ್ಪ-ಸೊಂತ ಮಾರ್ಗವಾಗಿ ಕಮಲಾಪುರ ತಾಲ್ಲೂಕಿನ ಚೇಂಗಟಾ ಮಸ್ತಾನ ಖಾದ್ರಿ ದರ್ಗಾಕ್ಕೆ ಬಂದಿದ್ದರು. ಮಾರ್ಗಮಧ್ಯದ ಪಟವಾದ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಸ್ನಾನ ಮಾಡಲು ಅಫ್ರೋಜ್ ಹಾಗೂ ತಾಜ್ಜುದೀನ್ ನೀರಲ್ಲಿ ಇಳಿದರು. ಆ ಬಳಿಕ ಸಾಜೀದ್ ಸಹ ನೀರಿಗೆ ಹಾರಿದ್ದು, ಕುಡಿದ ಮತ್ತಿನಲ್ಲಿ ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟರು. ಕಮಲಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜೀದ್ ಅವರು ನೀರಿಗೆ ಹಾರಿದ್ದ ದೃಶ್ಯಗಳನ್ನು ಮತ್ತೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನೀರಿನಲ್ಲಿ ಮುಳುಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೃತ ಸಾಜೀದ್ ಸಹೋದರ ಮೊಹಮ್ಮದ ರಶೀದ್, 'ನನ್ನ ತಮ್ಮನಿಗೆ ಈಜು ಬರುತ್ತಿದ್ದೆ. ಆದರೂ ನೀರಿನಲ್ಲಿ ಮುಳುಗಿ ಮೃತಪಟ್ಟ ಕುರಿತು ನನಗೆ ಬಲವಾದ ಸಂಶಯವಿದೆ. ಈ ಕುರಿತು ತನಿಖೆ ನಡೆಸುವಂತೆ ದೂರು ನೀಡಿದ್ದಾರೆ'. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.