ಗುಲ್ಬರ್ಗ: ಕಾಲೊನಿಗೆ ಬೇಕಾಗುವ ಮೂಲ ಸೌರ್ಯಗಳಾದ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ, ಶೌಚಾಲಯ, ಸಿ.ಸಿ. ರಸ್ತೆ ಎಲ್ಲವೂ ಸರಿಯಾಗಿಯೇ ಇದೆ. ಆದರೆ ಜೀವನ ನಡೆಸಲು ಬೇಕಾಗುವ ಉದ್ಯೋಗವಿಲ್ಲದೆ ಪ್ರತಿ ದಿನ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಇಲ್ಲಿನ ಜನರು ಭಿಕ್ಷಾಟನೆಗೆ ಇಳಿದಿದ್ದಾರೆ.
- ಇದು ಗುಲ್ಬರ್ಗದ ಮಹಾತ್ಮ ಗಾಂಧಿ ಜಿಲ್ಲಾ ಕುಷ್ಠರೋಗಿಗಳ ಕಾಲೊನಿಯಲ್ಲಿ ವಾಸವಾ ಗಿರುವ ಕುಷ್ಠರೋಗಿಗಳ ಪ್ರತಿನಿತ್ಯ ಗೋಳು. ಈ ಕಾಲೊನಿಯಲ್ಲಿ ಕುಷ್ಠರೋಗ ಪೀಡಿತ 86 ಕುಟುಂಬಗಳು ಇವೆ. ಇನ್ನೂ 50 ಕುಟುಂಬಗಳು ವಸತಿ ವ್ಯವಸ್ಥೆ ಇಲ್ಲದೆ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ.
ಕುಷ್ಠರೋಗ ಪೀಡಿತರ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳು, ವಸತಿ ನಿಲಯ, ಶಾಲೆ- ಕಾಲೇಜಿಗೆ ಸೇರಿಸುವ ವ್ಯವಸ್ಥೆ ಯಾವುದೂ ಇಲ್ಲ. ಇದರಿಂದಾಗಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಎಲ್ಲರಿಗೂ ಶಿಕ್ಷಣ ನೀಡಬೇಕು ಎನ್ನುವ ಸಿದ್ಧಾಂತ ಇಲ್ಲಿ ವಿಫಲವಾ ದಂತಿದೆ. ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವಿಲ್ಲ. ಇರುವ ಸರ್ಕಾರಿ ಸಂಚಾರಿ ಚಿಕಿತ್ಸಾ ಘಟಕ ಕೂಡ ನೆನಪಾದಾಗ ಆಗೊಮ್ಮೆ ಈಗೊಮ್ಮೆ ಬಂದು ಔಷಧಿ ನೀಡುತ್ತದೆ ಅಷ್ಟೆ. ಕುಷ್ಠರೋಗಿ ಗಳಿಗೆ ಸರ್ಕಾರ ಅಲ್ಪ ಧನ ಸಹಾಯ ಲಭಿಸುತ್ತದೆ ಎನ್ನುವುದೇ ಸ್ವಲ್ಪ ಸಮಾಧಾನ.
‘ಇಲಾಖೆ ಸ್ಪಂಧಿಸುತ್ತಿಲ್ಲ’: 'ಸರ್ಕಾರದಿಂದ ಬರುವ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ರೋಗ ಪೀಡಿತರ ಮಕ್ಕಳಲ್ಲಿ ಪದವೀಧರರೂ ಇದ್ದಾರೆ. ಅಂಥವರಿಗೆ ಸರ್ಕಾರ ಮೀಸಲಾತಿ ಅಡಿಯಲ್ಲಿ ನೌಕರಿ ನೀಡಿದರೆ ಕುಟುಂಬ ನಿರ್ವಹಣೆಗೆ ಸುಲಭವಾಗುತ್ತದೆ.
ಗುಣಮುಖರಾಗಿರುವ ಕುಷ್ಠರೋಗಿಗಳಿಗೆ ಹಾಗೂ ಅವರ ಮಕ್ಕಳಿಗೆ ಜೀವನ ನಿರ್ವಹಣೆಗೆ ಅನುಕೂಲಕ್ಕಾಗಿ ಆಟೊರಿಕ್ಷಾ ನೀಡುವಂತೆ ಪರಿಶಿಷ್ಟ ಜಾತಿ/ಪರಿಷ್ಠ ಪಂಗಡ ನಿಗಮಕ್ಕೆ ಪ್ರತಿ ವರ್ಷ ಅರ್ಜಿ ಸಲ್ಲಿಸಲಾಗುತ್ತಿದೆ ಆದರೆ ಈವರೆಗೂ ಪ್ರಯೋಜನವಾಗಿಲ್ಲ. ಆದ್ದರಿಂದ ಇವರಿಗೆ ಭಿಕ್ಷಾಟನೆಗೆ ಇಳಿಯುವುದು ಅನಿವಾ ರ್ಯವಾಗಿದೆ' ಎನ್ನುತ್ತಾರೆ ಹೈದರಾಬಾದ್ ಕರ್ನಾಟಕ ಕುಷ್ಠರೋಗ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹನುಮಂತ ಎಚ್. ದೇವನೂರು.
‘ವಸತಿ ಸೌಲಭ್ಯ ಕಲ್ಪಿಸಿ’
'ಸುಮಾರು ವರ್ಷಗಳಿಂದಲೂ ವಸತಿ ವ್ಯವಸ್ಥೆ ಇಲ್ಲದೇ ಅಲ್ಲಿ ಇಲ್ಲಿ ತಂಗುವಂತಾಗಿದೆ. ನನ್ನಂತೆ ಇನ್ನೂ 50 ಕುಟುಂಬಗಳು ವಸತಿ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದೆ. ಆಳಂದ ರಸ್ತೆಯಲ್ಲಿರುವ ಕುಷ್ಠರೋಗಿಗಳ ಪುರ್ನವಸತಿ ಕೇಂದ್ರ ಖಾಲಿ ಬಿದ್ದಿದೆ. ಅದರಲ್ಲಿ ನಮಗೆ ವಸತಿ ಕಲ್ಪಿಸಿದರೆ ಅನುಕೂಲವಾಗುತ್ತದೆ.
-ಪರಶುರಾಮ, ಕುಷ್ಠರೋಗ ಪೀಡಿತ
‘ಚಿಕಿತ್ಸೆಗೆ ರೋಗಿಗಳ ಸಹಕಾರ ಅಗತ್ಯ’
'ಒಮ್ಮೆ ಕುಷ್ಠ ಅಂಥ ಗೊತ್ತಾದ ತಕ್ಷಣ ಸೂಪರ್ವೈಜರಿ ಡೋಸ್ ಕೊಟ್ರೆ ಸಾಕು ಬ್ಯಾಕ್ಟೀರಿಯಾಗಳು ನಿಷ್ಕ್ರಿಯವಾಗಿ ರೋಗಿ ಗುಣಮುಖವಾಗು ತ್ತಾನೆ. ಆರು ತಿಂಗಳು ಚಿಕಿತ್ಸೆ ಪಡೆದರೆ ಸಾಕು ಮುಂದೆ ಅವರಿಗೆ ಅಷ್ಟಾಗಿ ಚಿಕಿತ್ಸೆ ಅವಶ್ಯಕತೆ ಬಿಳೋದಿಲ್ಲ. ನರಗಳಿಗೆ ರೋಗ ಹರಡಿದ್ದರೆ ಮಾತ್ರ ಒಂದು ವರ್ಷ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಮಹಾತ್ಮ ಗಾಂಧಿ ಜಿಲ್ಲಾ ಕುಷ್ಠರೋಗಿಗಳ ಕಾಲೊನಿಯಲ್ಲಿ ಇರುವವರು ಹಳೆ ರೋಗಿಗಳು. ಇವರಿಗೆ ಪ್ರತಿ ಆರು ತಿಂಗಳಿಗೆ ಒಂದು ಜೊತೆ ಎಂ.ಸಿ.ಆರ್. ಚಪ್ಪಲಿ ಹಾಗೂ ಸೆಲ್ಫ್ ಕಿಟ್ ಕೇರ್ ನೀಡಲಾಗುತ್ತದೆ. ಸರ್ಕಾರದ ವತಿಯಿಂದ ತರಬೇತಿ ನೀಡಿರುವುದರಿಂದ ಕಿಟ್ಗಳನ್ನು ತೆಗೆದುಕೊಂಡು ಕೈ ಕಾಲು ಊನವಾದ ರೋಗಿಗಳು ತಾವೇ ಮನೆಯಲ್ಲಿ ಕುಳಿತು ಡ್ರೆಸ್ಸಿಂಗ್ ಮಾಡಿಕೊಳ್ಳುತ್ತಾರೆ. 65 ಜನ ರೋಗಿಗಳು ಅಂಗವೈಕಲ್ಯದಿಂದ ಬಳಲುತಿದ್ದಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ ಭಿಕ್ಷಾಟನೆಗೆ ಹೋಗುತ್ತಾರೆ. ಕೈಯನ್ನು ಊರಿಕೊಂಡು ಹೋಗುವಾಗ ರಕ್ತಸ್ರಾವಾಗುವುದರಿಂದ ನಾವು ಆರು ತಿಂಗಳಿಗೊಮ್ಮೆ ನೀಡುವ ಔಷಧ ಕಿಟ್ ಅವರಿಗೆ ಸಾಕಾಗುವುದಿಲ್ಲ. ನಮ್ಮ ಹತ್ತಿರ ಇದ್ದಷ್ಟು ಔಷಧ ನೀಡಲು ಮಾತ್ರ ಸಾಧ್ಯ'.
–ಎಂ. ವರ್ಮಾ, ಜಿಲ್ಲಾ ಕುಷ್ಠರೋಗಿಗಳ ಅಧಿಕಾರಿ
‘ಹೊಲಿಗೆ ಯಂತ್ರ ನೀಡಿ’
ಈ ಕಾಲೊನಿಯಲ್ಲಿ ಹೊಲಿಗೆ ತರಬೇತಿ ಪಡೆದವರು ಸುಮಾರು 25 ಜನ ಇದ್ದೇವೆ. ಸರ್ಕಾರ ನಮಗೆ ಹೊಲಿಗೆ ಯಂತ್ರಗಳನ್ನು ನೀಡಿದರೆ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ.
–ಅನಿತಾ, ಕಾಲೊನಿ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.