ಕಲಬುರ್ಗಿ: ‘ಬದಲಾಗುತ್ತಿರುವ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಯೇ ಜನರ ಬಳಿ ಬರುವಂತಿರಬೇಕು’ ಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಉಮೇಶ ಶೆಟ್ಟಿ ಹೇಳಿದರು.
ನಗರದ ನೆಹರೂ ಗಂಜ್ನ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಕಲಬುರ್ಗಿ ಉತ್ತರ ಮತಕ್ಷೇತ್ರದ ವಿಕಾಸ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರ ಬದುಕು ಸಾರ್ಥಕವಾಗಲಿ ಎಂಬ ಸದಾಶಯದೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇನೆ. ಕಲಬುರ್ಗಿ ಉತ್ತರ ಕ್ಷೇತ್ರದ ಅಭಿವೃದ್ಧಿಯ ಕನಸು ಸಾಕಾರಗೊಳಿಸಲು, ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಕುಪೇಂದ್ರ ಪಾಟೀಲ ಮಾತನಾಡಿ, ‘ಬದಲಾಗುತ್ತಿರುವ ರಾಜಕೀಯವನ್ನು ಸರಿದಾರಿಗೆ ತರಬೇಕಾಗಿದೆ. ರಾಜಕೀಯ ಕ್ಷೇತ್ರಕ್ಕೆ ಬರುವ ಎಲ್ಲರೂ ಅಭಿವೃದ್ಧಿಪರರು ಎಂಬುದನ್ನು ನಿರೂಪಿಸುತ್ತಾರೆ. ಆದರೆ ಶಾಸಕರಾಗಿ ಆಯ್ಕೆಯಾದ ನಂತರ ಎಲ್ಲವನ್ನು ಮರೆತು ಬಿಡುತ್ತಾರೆ. ಆದರೆ ಉಮೇಶ ಶೆಟ್ಟಿ ಇದಕ್ಕೆ ಹೊರತಾಗಿದ್ದಾರೆ’ ಎಂದು ಹೇಳಿದರು.
ಅಲ್ಪಸಂಖ್ಯಾತರ ಮುಖಂಡ ಅಖ್ತರ್ ಅಲಿ ಮುದ್ಗಲ್, ಡಾ. ಸುಧೀಂದ್ರ ದೇಶಪಾಂಡೆ ಮಾತನಾಡಿದರು.
ಇದೇ ಸಂದರ್ಭದಲ್ಲಿ www.umeshshetty.in ವೆಬ್ಸೈಟ್ ಅನ್ನು ಸಿದ್ದು ಹೆಬ್ಬಾಳ ಹಾಗೂ ವಿಜಯರಾಜ ರೆಡ್ಡಿ ಅನಾವರಣಗೊಳಿಸಿದರು.
ಹಿರಿಯ ಮುಖಂಡರಾದ ಸೋಮಶೇಖರ ಚಿನಮಳ್ಳಿ, ಮಚೇಂದ್ರನಾಥ ಮೂಲಗೆ, ಶಿವಾನಂದ ಕಶೆಟ್ಟಿ, ಎಂ.ಬಿ.ಸಿಪಾಯಿ, ಶರಣಮ್ಮ ರಂಜೋಳಕರ್, ಜಯಶ್ರೀ ಗುರುಮೂರ್ತಿ, ಅನಿತಾ ಕಾಡಪ್ಪಗೋಳ, ಮಂಜುನಾಥ ಚಿಲಶೆಟ್ಟಿ ಇದ್ದರು.