ಅಫಜಲಪುರ: ‘ಸರ್ಕಾರ ಹಲವಾರು ಭಾಗ್ಯಗಳನ್ನು ಮಾಡುವುದರ ಜತೆಗೆ ಪಶುಭಾಗ್ಯವನ್ನು ಮಾಡಿದ್ದರಿಂದ ಬಡ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಜೀವನ ಸಾಗಿಸಲು ಅನುಕೂಲವಾಗಿದೆ’ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಬುಧವಾರ ಪಶುಭಾಗ್ಯ ಯೋಜನೆ ಅಡಿಯಲ್ಲಿ ಆಯ್ಕೆಯಾದ ಮಹಿಳೆಯರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ‘ಪಶುಭಾಗ್ಯ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ಸಂಬಂಧಪಟ್ಟ ಬ್ಯಾಂಕ್ಗಳಿಗೆ ಭೇಟಿಯಾಗಬೇಕು. ಒಟ್ಟು 90 ಫಲಾನುಭವಿಗಳನ್ನು ಆಯ್ಕೆ ಮಾಡ
ಲಾಗಿದೆ. ಅದರಲ್ಲಿ ಶೇ 98ರಷ್ಟು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ’ ಎಂದರು.
‘ಸಹಾಯಧನ ಸರಿಯಾಗಿ ಉಪಯೋಗಿಸಿಕೊಂಡು ಆಕಳು ಇಲ್ಲವೇ ಕುರಿ ಖರೀದಿ ಮಾಡಿಕೊಂಡು ಸ್ವಉದ್ಯೋಗ ಮಾಡಬೇಕು’ ಎಂದು ಅವರು ತಿಳಿಸಿದರು.
ಪಶು ಸಂಗೋಪನೆ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ ಮಾತನಾಡಿ, ‘ಇದು ಒಳ್ಳೆಯ ಯೋಜನೆಯಾಗಿದ್ದು, ಒಂದು ಸಣ್ಣ ಬಡಕುಟುಂಬ ಜೀವನ ಸಾಗಿಸಬಹುದಾಗಿದೆ. ಒಟ್ಟು 90 ಫಲಾನುಭವಿಗಳನ್ನು ಮೀಸಲಾತಿ ಪ್ರಕಾರ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 11 ಜನರಿಗೆ ಚೆಕ್ ವಿತರಿಸಲಾಗಿದೆ. ಉಳಿದ ಚೆಕ್ಗಳನ್ನು ಸಂಬಂಧಪಟ್ಟ ಬ್ಯಾಂಕ್ಗಳಿಗೆ ಕಳುಹಿಸಿಕೊಡಲಾಗುವುದು’ ಎಂದರು.
ತಾ.ಪಂ ಅಧ್ಯಕ್ಷೆ ರುಕ್ಮಿಣಿ ಬಾಬು ಜಮಾದಾರ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ತಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಗೌಡಗಾಂವ್, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ, ಪಶು ಭಾಗ್ಯ ಆಯ್ಕೆ ಸಮಿತಿ ನಿರ್ದೇಶಕರಾದ ಶಿವು ನೂಲಾ ಇದ್ದರು.