ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

230 ವರ್ಷ ಇತಿಹಾಸದ ಅನ್ನಮ್ಮ ಚರ್ಚ್

1792ರಲ್ಲಿ ರಾಜ ವೀರರಾಜೇಂದ್ರ ಕಾಲದಲ್ಲಿ ನಿರ್ಮಾಣ; ಕ್ರಿಸ್‌ಮಸ್‌ ಹಬ್ಬಕ್ಕೆ ಭರದ ಸಿದ್ಧತೆ
Last Updated 21 ಡಿಸೆಂಬರ್ 2022, 11:24 IST
ಅಕ್ಷರ ಗಾತ್ರ

ವಿರಾಜಪೇಟೆ: ಇಲ್ಲಿನ ಸಂತ ಅನ್ನಮ್ಮ ಚರ್ಚ್ ಕೇವಲ ವಿರಾಜಪೇಟೆ ಮಾತ್ರವಲ್ಲ ಕೊಡಗು ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಚರ್ಚ್ ಎನಿಸಿದೆ. ಸರಿಸುಮಾರು 2 ಶತಮಾನಗಳನ್ನು ಕಂಡಿರುವ ಈ ಚರ್ಚ್ ರಾಜ್ಯದ ಐತಿಹಾಸಿಕ ಚರ್ಚ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದು.

ವಿರಾಜಪೇಟೆ ಪಟ್ಟಣದ ನಿರ್ಮಾತೃ ವೀರರಾಜೇಂದ್ರ ಅವರ ಕಾಲದಲ್ಲಿ ಅಂದರೆ 1792ರಲ್ಲಿ ಈ ಚರ್ಚ್‌ ಅನ್ನು ಸ್ಥಾಪಿಸಲಾಗಿದೆ. 18ನೇ ಶತಮಾನದ ಉತ್ತರಾರ್ಧದ ಕೊನೆಯಲ್ಲಿ ಟಿಪ್ಪು ಹಾಗೂ ಬ್ರಿಟಿಷರ ನಡುವೆ ಯುದ್ಧಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯಲ್ಲಿನ ಕ್ರೈಸ್ತರು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಟಿಪ್ಪು ಸುಲ್ತಾನ್‌, 1784ರಲ್ಲಿ ಇಲ್ಲಿನ ಸಾವಿರಾರು ಕ್ರೈಸ್ತರನ್ನು ಸೆರೆಯಾಳುಗಳಾಗಿ ಶ್ರೀರಂಗಪಟ್ಟಣಕ್ಕೆ ಒಯ್ಯುತ್ತಾನೆ.

1791ರಲ್ಲಿ ಟಿಪ್ಪು ಹಾಗೂ ಬ್ರಿಟಿಷರ ನಡುವೆ ಮೂರನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಲಾರ್ಡ್ ಕಾರ್ನ್‍ವಾಲಿಸನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದಾಗ ಬಂಧಿಗಳಾಗಿದ್ದ ಕರಾವಳಿಯ ಸಾಕಷ್ಟು ಕ್ರೈಸ್ತರು ತಪ್ಪಿಸಿಕೊಳ್ಳುತ್ತಾರೆ. ಆದರೆ, ತಮ್ಮ ತಾಯ್ನಾಡು ಇನ್ನೂ ಟಿಪ್ಪುವಿನ ವಶದಲ್ಲಿರುವುರಿಂದ ಅಲ್ಲಿ ಹೋಗಿ ಮತ್ತೆ ನೆಲೆಸುವುದು ಅವರಿಗೆ ಕಷ್ಟಕರವಾಗಿ ಪರಿಣಮಿಸಿತು. ಹಾಗಾಗಿ, ಅವರು ಗೋವಾದಿಂದ ಬಂದ ಸ್ವಾಮಿ ಜುವಾಂವ್ ಡಿಕೋಸ್ಟ ಅವರೊಂದಿಗೆ ಕೊಡಗಿನ ರಾಜ ವೀರರಾಜೇಂದ್ರನ ಆಶ್ರಯವನ್ನು ಕೇಳುತ್ತಾರೆ.

ಟಿಪ್ಪುವಿನ ವಿರೋಧಿಯಾಗಿದ್ದ ರಾಜ ಸಹಜವಾಗಿ ಕ್ರೈಸ್ತರಿಗೆ ಆಶ್ರಯ ನೀಡಿ ತಾನು ಹೊಸದಾಗಿ ಕಟ್ಟಿದ್ದ ವೀರರಾಜೇಂದ್ರಪೇಟೆಯಲ್ಲಿ (ವಿರಾಜಪೇಟೆ) ನೆಲೆಸಲು ಅಗತ್ಯ ವ್ಯವಸ್ಥೆ ಕಲ್ಪಿಸುತ್ತಾರೆ. ಜತೆಗೆ, ಪಟ್ಟಣದಲ್ಲಿ ಚರ್ಚ್‍ವೊಂದನ್ನು ನಿರ್ಮಿಸುತ್ತಾನೆ. ಹೀಗೆ, 1792ರಲ್ಲಿ ಅಸ್ತಿತ್ವಕ್ಕೆ ಬಂದ ಸಂತ ಅನ್ನಮ್ಮ ಚರ್ಚ್‍ಗೆ ಸ್ವಾಮಿ ಜುವಾಂವ್ ಡಿಕೋಸ್ಟ ಮೊದಲ ಧರ್ಮಗುರುವಾಗುತ್ತಾರೆ.

1848ರವರೆಗೆ ಸಂತ ಅನ್ನಮ್ಮ ದೇವಾಲಯದ ಕೊಡಗಿನ ಏಕೈಕ ಕ್ರೈಸ್ತ ದೇವಾಲಯವಾಗಿತ್ತು. 1868ರಲ್ಲಿ ವಿರಾಜಪೇಟೆ ಧರ್ಮ
ಕೇಂದ್ರದ ಧರ್ಮಗುರು ಗಿಲೋನ್ ಅವರು ಹಳೆಯ ಚರ್ಚ್ ಇದ್ದ ಸ್ಥಳದಲ್ಲಿಯೇ ಗೋಥಿಕ್ ಮಾದರಿಯ ಈಗಿನ ಚರ್ಚ್‌ನ್ನು ಕಟ್ಟಿಸಿದರು. ಬ್ರಿಟೀಷ್ ಸರ್ಕಾರ ಹಾಗೂ ಸಾಹುಕಾರ್ ಸಾಲ್ವಾದೊರ್ ಪಿಂಟೋ ಅವರ ಸಹಾಯದಿಂದ ಸುಮಾರು 150 ಅಡಿ ಎತ್ತರದ ಸುಂದರ ಗೋಪುರ ಒಳಗೊಂಡ ಚರ್ಚ್‌ನ್ನು ಕಟ್ಟಲಾಯಿತು. ಪ್ಯಾರಿಸ್‍ನಿಂದ 1891ರಲ್ಲಿ ಎರಡು ದೊಡ್ಡ ಗಂಟೆಗಳನ್ನು ತರಿಸಿ ಅಳವಡಿಸಲಾಯಿತು.

ಹೀಗೆ ನಿರ್ಮಾಣವಾದ ಸಂತ ಅನ್ನಮ್ಮ ಚರ್ಚ್‍ನ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ 2015ರಲ್ಲಿ ಧರ್ಮ
ಗುರು ಡಾ.ಆರೋಗ್ಯ ಸ್ವಾಮಿ ಅವರ ನೇತೃತ್ವದಲ್ಲಿ ನವೀಕರಣ ಕಾರ್ಯ ನಡೆಯಿತು. ಪ್ರಸ್ತುತ ಚರ್ಚ್‍ನ ಪ್ರಧಾನ ಧರ್ಮಗುರುವಾಗಿ ಡಾ.ದಯಾನಂದ ಪ್ರಭು, ಧರ್ಮಗುರುಗಳಾಗಿ ರೆವರೆಂಡ್ ಫಾದರ್ ಐಸಾಕ್ ರತ್ನಾಕರ್ ಹಾಗೂ ರೆವರೆಂಡ್ ಫಾದರ್ ಯೇಸು ಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದಾರೆ. ಚರ್ಚ್‌ನಲ್ಲಿ ಕ್ರಿಸ್‍ಮಸ್‍ ಅನ್ನು ಸಡಗರದಿಂದ ಅದ್ಧೂರಿ ಯಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT