ಮಡಿಕೇರಿ: ನಗರದಲ್ಲಿ ವಾಸವಿದ್ದ ಸಂಬಂಧಿಕರಿಗೆ ತನ್ನ ಮದುವೆಯ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಮದುಮಗ ಸೇರಿ, ಇಬ್ಬರು ಸಮೀಪದ ಸಂಪಿಗೆಕಟ್ಟೆಯಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೈಸೂರಿನ ವಿಶ್ವನಾಥ್ (32) ಹಾಗೂ ಅತ್ತಿಗೋಡಿನ ದಿನೇಶ್ (23) ಅವರು ಮೃತಪಟ್ಟವರು.
ವಿಶ್ವನಾಥ್ ಅವರ ವಿವಾಹವು ಸೆ.19ಕ್ಕೆ ನಿಗದಿಯಾಗಿತ್ತು. ಸಂಬಂಧಿಕರ ಮನೆಗೆ ಬೈಕ್ನಲ್ಲಿ ಬರುವಾಗ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಟಿಪ್ಪರ್ ಇವರ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಶ್ವನಾಥ್ ಅವರು ಎಲ್.ಎಲ್.ಬಿ ಪದವಿ ಮುಗಿಸಿ, ವಕೀಲ ವೃತ್ತಿಯನ್ನು ಆರಂಭಿಸಿದ್ದರು. ದಿನೇಶ್ ಪದವಿ ವ್ಯಾಸಂಗ ಮಾಡುತ್ತಿದ್ದರು.