ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಕೆರೆಗಳು ಬತ್ತಿ ಹೋಗಿದ್ದು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಅರಣ್ಯ ಇಲಾಖೆ ವತಿಯಿಂದ ಆನೆಕಾಡು, ಮೀನುಕೊಲ್ಲಿ, ಅತ್ತೂರು ಅರಣ್ಯ ಪ್ರದೇಶ ಸೇರಿದಂತೆ ಹಲವು ಕಡೆ ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ ವರ್ಷ ವಾಡಿಕೆ ಮಳೆ ಆಗದ ಹಿನ್ನೆಲೆಯಲ್ಲಿ ಹಾಗೂ ಬಿಸಿಲಿನ ತಾಪಮಾನದಿಂದ ಅಲ್ಪಸ್ವಲ್ಪ ಇದ್ದ ನೀರು ಕೂಡ ಕೆಲವು ಕೆರೆಗಳಲ್ಲಿ ಹಿಂಗಿ ಹೋಗಿದೆ.
ಅರಣ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಕೆಲವು ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಜೊತೆಗೆ, ಸುಡು ಬಿಸಿಲಿಗೆ ಬಹುತೇಕ ಅರಣ್ಯ ಪ್ರದೇಶ ಒಣಗಿ ನಿಂತಿದೆ. ಇದರಿಂದ ಅರಣ್ಯದಲ್ಲಿ ಮೇವಿನ ಜೊತೆಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿ ಪ್ರಾಣಿ ಪಕ್ಷಿಗಳು ಹಸಿವಿನಿಂದ ಪರಿತಪಿಸುತ್ತಿವೆ. ಈಗಾಗಲೇ ಪ್ರಾಣಿ, ಪಕ್ಷಿಗಳು ನಿತ್ರಾಣಗೊಳ್ಳುತ್ತಿವೆ. ಇದರಿಂದಾಗಿ ಆಹಾರ ಹಾಗೂ ನೀರು ಅರಸಿಕೊಂಡು ನಾಡಿನತ್ತ ಹೆಜ್ಜೆ ಹಾಕುತ್ತಿರುವ ಕಾಡು ಪ್ರಾಣಿಗಳು ರೈತರ ತೋಟ, ಹೊಲಗದ್ದೆಗಳಿಗೆ ಲಗ್ಗೆ ಹಾಕಿ ಹಸಿವನ್ನು ನೀಗಿಸಿಕೊಳ್ಳುತ್ತಿವೆ.
ಕಳೆದ ವರ್ಷ ಫೆಬ್ರುವರಿ ಹೊತ್ತಿಗೆ ಮಳೆಯಾಗಿತ್ತು. ವರ್ಷವಿಡೀ ಒಂದಿಲ್ಲೊಂದು ದಿನ ಒಂದಷ್ಟು ಮಳೆ ಸುರಿಯುತ್ತಿತ್ತು. ಇದರಿಂದ ಸಾಮಾನ್ಯವಾಗಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಆದರೆ, ಈ ವರ್ಷ ಸತತ ಎರಡು ತಿಂಗಳ ಕಾಲ ಮಳೆಯೇ ಆಗಿಲ್ಲ. ಹೀಗಾಗಿ, ಕೆರೆಗಳೆಲ್ಲವೂ ಒಣಗುವ ಹಂತಕ್ಕೆ ತಲುಪಿವೆ. ಕೆಲವೆಡೆ ಒಣಗಿ ಹೋಗಿದೆ.
‘ಅರಣ್ಯ ಪ್ರದೇಶದಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗೊತ್ತಿದ್ದರೂ ಕೂಡ ಅರಣ್ಯ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಒಣಗಿರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ಪ್ರಾಣಿಗಳಿಗೆ ಆಹಾರ ಪೂರೈಕೆಗೆ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಮುಖಂಡ ಮಂಜುನಾಥ್ ಆಗ್ರಹಿಸಿದರು.
ಆರಣ್ಯ ಪ್ರದೇಶದಲ್ಲಿರುವ ಬಹುತೇಕ ಕೆರೆಗಳಲ್ಲಿ ನೀರು ತುಂಬಿದೆ. ಒಂದೆರಡು ಕೆರೆಗಳಲ್ಲಿ ಮಾತ್ರ ನೀರು ಕಡಿಮೆಯಾಗಿದೆ. ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಸಮಸ್ಯೆ ಕಂಡು ಬಂದರೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.
ಈಗ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೆ ಹೆಚ್ಚಿನ ಸಂಸ್ಯೆ ಉಂಟಾಗಿಲ್ಲ. ಒಂದು ವೇಳೆ ಸಮಸ್ಯೆ ಕಂಡು ಬಂದರೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆರತನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.