ನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದ ಪುರಾತನ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮೂರು ವರ್ಷಗಳಿಂದ ಸಾಗಿ ಇದೀಗ ಪುನರ್ ನಿರ್ಮಾಣಗೊಂಡಿದ್ದು ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವ ಮಾರ್ಚ್ 7ರಿಂದ 14 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿದೆ.
ಕೊರೊನಾ ಸಂಕಷ್ಟದ ನಡುವೆ ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮಸ್ಥರು ಪಣತೊಟ್ಟು ದೇವಾಲಯದ ಕಾರ್ಯ ಆರಂಭಿಸಿದ್ದರು. ಸುಮಾರು ₹ 1.8 ಕೋಟಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದು ಊರಿನ ಭಕ್ತರು ತನು, ಮನ ಧನದಿಂದ ಸಹಕರಿಸಿದ್ದಾರೆ.
ಮಂಗಳೂರು ಮರಕಡ ಕ್ಷೇತ್ರದ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ದೇವತಾ ಕಾರ್ಯಕ್ಕೆ ಮುನ್ನಡಿ ಇರಿಸಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮುಕ್ತಾಯದ ಹಂತದಲ್ಲಿದೆ.
ದೇವಾಲಯವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಲವು ವರ್ಷಗಳ ಹಿಂದೆ ಮಚ್ಚೇಂದ್ರನಾಥ ಗುರು, ಕಣ್ವಮುನಿ ಹಾಗೂ ಅಗಸ್ತ್ಯ ಮಹರ್ಷಿ ತಪಸ್ಸು ಮಾಡಿ ತ್ರಿಶಕ್ತಿ ರೂಪಿಣಿ ಉದ್ಭವಿಸಿದ ಸ್ಥಳ ಇದು ಎಂದು ಹೇಳಲಾಗುತ್ತಿದೆ. ತ್ರಿಶಕ್ತಿ ರೂಪಿಣಿ ಉದ್ಭವವಾಗಿ ಗ್ರಾಮದ ಜನರ ಮೇಲೆ ಹೊದ್ದು (ಕೊಡವ ಭಾಷೆಯಲ್ಲಿ ಪೊದ್ದ್) ಬಂದ ತಾಣ ಪೊದ್ದೂರು ಆಗಿ ಬಳಿಕ ಹೊದ್ದೂರು ಎನಿಸಿಕೊಂಡಿತು.
ಇಲ್ಲಿ ರಾಜ ಮಯೂರವರ್ಮನ ಅರಮನೆ ಇತ್ತು ಎನ್ನುವುದಕ್ಕೆ ಕುರುಹುಗಳಿವೆ. ಮಚ್ಚೇಂದ್ರನಾಥರ ಗುರುಪೀಠ ಇದೆ. ಶ್ರೀ ದೇವಿಯ ಕ್ಷೇತ್ರವು ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಭಗವತಿ ದೇವಿಯು ತ್ರಿ ಸ್ವರೂಪಿ ಶಕ್ತಿಯಾಗಿದ್ದು ಸ್ವಕ್ಷೇತ್ರದಲ್ಲಿಯೇ ಉದ್ಭವವಾದಂತಹ ಶಕ್ತಿದೇವತೆಯಾಗಿರುತ್ತಾಳೆ. ಈ ದೇವಾಲಯದಲ್ಲಿ ಹಿಂದೆ ಶ್ರೀಚಕ್ರ ಇದ್ದು ಇಲ್ಲಿ ಋಷಿಮುನಿಗಳು ಜಪ–ತಪ ಮಾಡಿರುವಂತಹ ಕುರುಹು ಕಂಡುಬಂದಿದೆ.
ದೇವಾಲಯವು ಶಿಥಿಲಗೊಂಡಿದ್ದು ದೇವಿಯ ವಿಗ್ರಹವು ವಿಘ್ನಗೊಂಡಿದ್ದರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಗ್ರಾಮದಲ್ಲಿ 27 ತೆರಿಗೆ ಕುಟುಂಬಗಳಿದ್ದು ಪ್ರತಿ ಕುಟುಂಬದಿಂದ ಒಬ್ಬರಂತೆ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿದ್ದು ದೇವಿಯ ಕ್ಷೇತ್ರವನ್ನು ಶಿಲೆಯಲ್ಲಿ ನಿರ್ಮಿಸಲಾಗಿದೆ. ತಂತ್ರಿಗಳಾಗಿ ನೀಲೇಶ್ವರ ದಾಮೋದರ ಹಾಗೂ ಪದ್ಮನಾಭ, ಬೆಳ್ತಂಗಡಿಯ ರಾಜೇಂದ್ರ ಪ್ರಧಾನ ಶಿಲ್ಪಿಯಾಗಿ, ವಾಸ್ತುಶಿಲ್ಪಿಯಾಗಿ ಕಾಸರಗೋಡಿನ ಬೆದರಡ್ಕ ರಮೇಶ್ ಕಾರಂತ ಕಾರ್ಯನಿರ್ವಹಿಸಿದ್ದಾರೆ.
ಜೀರ್ಣೋದ್ಧಾರಗೊಂಡಿರುವ ಭಗವತಿ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಬ್ರಹ್ಮ ಕಳಶ ಮತ್ತು ವೈದಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೆಯು ಪದ್ಮನಾಭ ತಂತ್ರಿಗಳ ಹಾಗೂ ದೇವಸ್ಥಾನದ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಜರುಗಲಿವೆ.
ಪ್ರತಿ ದಿನ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಊರಿನ ಎಲ್ಲಾ ಭಕ್ತರು ಸೇರಿ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಿದ್ದಾರೆ. ದೇಗುಲವನ್ನು ಶಿಲೆಯಲ್ಲಿ ನಿರ್ಮಿಸಲಾಗಿದ್ದು ಗ್ರಾಮದ ಜನತೆಗೆ ಒಳಿತಾಗಲಿದೆಚೌರೀರ ಉದಯ ಜೀರ್ಣೋದ್ಧಾರ ಸಮಿತಿ ಸದಸ್ಯ
2017ರ ಅಕ್ಟೋಬರ್ನಲ್ಲಿ ಸ್ವರ್ಣರೂಢ ಪ್ರಶ್ನೆ ಇಡಲಾಯಿತು. ನಂತರ ಜೀರ್ಣೋದ್ಧಾರ ಕೈಗೊಂಡು ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸವಕ್ಕೆ ಸಜ್ಜಾಗಿದೆನೆರವಂಡ ಸಂಜಯ ಪೂಣಚ್ಚ ತಕ್ಕ ಮುಖ್ಯಸ್ಥರು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ
ಕಾರ್ಯಕ್ರಮಗಳ ವಿವರ
ಮಾರ್ಚ್ 13ರಂದು ಬೆಳಿಗ್ಗೆ 8ರಿಂದ 10.30ರ ಒಳಗೆ ಮೇಷ ಲಗ್ನ ಶುಕ್ಲ ಪಕ್ಷ ಚತುರ್ಥ ತಿಥಿ ಸುಮಹೂರ್ತದಲ್ಲಿ ದೇವಾಲಯದಲ್ಲಿ ಪೀಠ ಪ್ರತಿಷ್ಠೆ ಬಿಂಬ ಪ್ರತಿಷ್ಠೆ ನಾಗ ಪ್ರತಿಷ್ಠೆ ಬ್ರಹ್ಮ ಕಳಶ ಪೂಜೆ ಅಷ್ಟಬಂಧ ಕ್ರಿಯೆ ಕುಂಭೇಶಾಭಿಷೇಕ ನಿದ್ರಾ ಕಳಶಾಭಿಷೇಕ ಜೀವ ಕಳಶಾಭಿಷೇಕ ಜೀವಆಹ್ವಾನ ಪ್ರತಿಷ್ಠಾ ಬಲಿ ಪರಿವಾರ ಪ್ರತಿಷ್ಠೆ ಹಾಗೂ ಮಹಾಪೂಜೆ.
ಸಂಜೆ 5 ಗಂಟೆಗೆ ಅಧಿವಾಸ ಹೋಮ ದೀಪಾರಾಧನೆ ಮಹಾಬಲಿಪೀಠ ಆದಿವಾಸ ತ್ರಿಕಾಲ ಪೂಜೆ ಕಳಶಾದಿ ವಾಸ.
ಮಾರ್ಚ್ 8ರಂದು ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ ವಾಸ್ತು ಹೋಮ ವಾಸ್ತು ಬಲಿ ವಾಸ್ತು ಕಳಸಾಭಿಷೇಕ.
ಮಾರ್ಚ್ 9ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಸಂಜೆ 5ರಿಂದ ಅಂಕುರ ಆರೋಹಣ ವಿಗ್ರಹ ಪರಿಗ್ರಹ ದೀಪರಾಧನೆ.
ಮಾರ್ಚ್ 10ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಸಂಜೆ 6ರಿಂದದ ದೀಪಾರಾಧನೆ ಅಂಕುರ ಪೂಜೆ.
ಮಾರ್ಚ್ 11ರಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಹೋಮ ತ್ರಿಕಾಲ ಪೂಜೆ ಸಂಜೆ ಐದು ಗಂಟೆಯಿಂದ ಅನುಜ್ಞಾ ಬಲಿ6.30ರಿಂದ ಅನುಜ್ಞಾ ಪ್ರಾರ್ಥನೆ ಗ್ರಾಮಸ್ಥರಿಂದ.
ಮಾರ್ಚ್ 12ರಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಹೋಮ ಕಳಶ ಮಂಟಪ ಸಂಸ್ಕಾರ ಸಂಜೆ 4ಕ್ಕೆ ಜಲೋದ್ಧಾರ ಬಿಂಬಶುದ್ಧಿ.
ಮಾರ್ಚ್ 14ರಂದು ಬೆಳಿಗ್ಗೆ 5ಗಂಟೆಗೆ ಗಣಪತಿ ಹೋಮ ಮಹಾಬಲಿ ಪೀಠ ಪ್ರತಿಷ್ಠೆ ತತ್ವ ಕಲಶ ಪೂಜೆ ಮಧ್ಯಾಹ್ನ 3 ಗಂಟೆಗೆ ದೇವರ ನೃತ್ಯ ಬಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.