ಮಡಿಕೇರಿ: ‘ತೀರ್ಥರೂಪು ತಂದೆಯವರಿಗೆ, ಮಾತೃಶ್ರೀ ತಾಯಿಯವರಿಗೆ, ನಮ್ಮ ಭವಿಷ್ಯಕ್ಕಾಗಿ ದಯವಿಟ್ಟು ಈ ಬಾರಿ ಮರೆಯದೇ ಮತದಾನ ಮಾಡಿ...’
–ಮೊಬೈಲ್ಫೋನ್ ಬಳಕೆಗೆ ಬರುವುದಕ್ಕೆ ಮುನ್ನ, ದೂರದ ಊರುಗಳಿಂದ ಮಕ್ಕಳು ತಮ್ಮ ತಂದೆ, ತಾಯಿಗೆ ಬರೆಯುತ್ತಿದ್ದ ಅಂಚೆ ಪತ್ರಗಳು ಲೋಕಸಭೆ ಚುನಾವಣೆಯ ವೇಳೆ ಮುನ್ನೆಲೆಗೆ ಬಂದಿವೆ. ಕೊಡಗು ಜಿಲ್ಲೆಯ ವಸತಿ ಶಾಲೆಗಳ ವಿದ್ಯಾರ್ಥಿಗಳು ಹೀಗೆ ಪತ್ರ ಬರೆದು ಮತದಾನ ಮಾಡುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ, ಜಿಲ್ಲೆಯ 9 ವಸತಿ ಶಾಲೆ ಮತ್ತು ನೂರಕ್ಕೂ ಅಧಿಕ ವಿದ್ಯಾರ್ಥಿನಿಲಯಗಳಲ್ಲಿ ಸುಮಾರು 12,500 ವಿದ್ಯಾರ್ಥಿಗಳು 6ನೇ ತರಗತಿಯಿಂದ ಪಿಯುಸಿವರೆಗೆ ಓದುತ್ತಿದ್ದು, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು (ಸ್ವೀಪ್) ನೇತೃತ್ವದಲ್ಲಿ ಈಗಾಗಲೇ ಪತ್ರಗಳನ್ನು ಬರೆದಿದ್ದಾರೆ. ಬೀದರ್ನಿಂದ ಚಾಮರಾಜನಗರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳೂ ಇಲ್ಲಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ‘ಮಕ್ಕಳ ಪತ್ರವನ್ನು ಓದಿಯಾದರೂ ಪೋಷಕರು ಮತದಾನ ಮಾಡುತ್ತಾರೆಂಬ ನಿರೀಕ್ಷೆ ಇದೆ’ ಎಂದರು.
ಸಮಿತಿಯ ನೋಡಲ್ ಅಧಿಕಾರಿ ಶೇಖರ್ ಪ್ರತಿಕ್ರಿಯಿಸಿ, ‘ಪತ್ರ ಎಂಬುದು ಭಾವನಾತ್ಮಕ ಸೆಲೆ. ಪತ್ರಗಳೇ ಅಪರೂಪವೆನಿಸಿರುವ ಹೊತ್ತಿನಲ್ಲಿ ಮಕ್ಕಳಿಂದ ಪತ್ರ ಬಂದರೆ ಪೋಷಕರು ಖುಷಿಯಾಗುತ್ತಾರೆ. ಮಕ್ಕಳ ಕೈಬರಹ ನೋಡಿ ಆನಂದಪಡುತ್ತಾರೆ. ತಮ್ಮ ಭವಿಷ್ಯಕ್ಕಾಗಿ ಮತದಾನ ಮಾಡಿ ಎಂದು ಬರೆದಿರುವುದನ್ನು ಕಂಡು ಖಂಡಿತ ಮತದಾನ ಮಾಡುತ್ತಾರೆ’ ಎಂದ ವಿಶ್ವಾಸ ವ್ಯಕ್ತಪಡಿಸಿದರು.
Highlights - ವಿದ್ಯಾರ್ಥಿ ನಿಲಯಗಳಲ್ಲಿದ್ದಾರೆ ರಾಜ್ಯದೆಲ್ಲೆಡೆಯ ಮಕ್ಕಳು ಎಲ್ಲ ಮಕ್ಕಳಿಂದ ಪೋಷಕರಿಗೆ ಪತ್ರ ಪತ್ರ ನೋಡಿ ಪೋಷಕರು ಮತ ಹಾಕುತ್ತಾರೆಂಬ ನಿರೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.