ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ನಾಣ್ಯ– ನೋಟು ಸಂಗ್ರಹ ಅಜಯ್ ರಾವ್ ಸಾಧನೆ

ಪ್ರದರ್ಶನದಿಂದ ಬರುವ ಹಣ ಅನಾಥರು, ಅಂಧ ಮಕ್ಕಳಿಗೆ ನೀಡುವ ಗುರಿ
Last Updated 11 ಜನವರಿ 2023, 22:45 IST
ಅಕ್ಷರ ಗಾತ್ರ

ವಿರಾಜಪೇಟೆ: 190ಕ್ಕೂ ಹೆಚ್ಚು ರಾಷ್ಟ್ರಗಳ ನಾಣ್ಯ ಹಾಗೂ ನೋಟುಗಳನ್ನು ನೋಡಬೇಕೇ? ಹಾಗಾದರೆ, ಇಲ್ಲಿಗೆ ಸಮೀಪದ ಐಮಂಗಲ ಗ್ರಾಮದ ವಿನಾಯಕ ನಗರದ ಅಜಯ್ ರಾವ್ ಅವರ ಮನೆಗೆ ಬನ್ನಿ.

ಇವರ ಬಳಿ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಬೇರೆ ಬೇರೆ ಕಾಲಘಟ್ಟದ ಬಗೆ ಬಗೆಯ ನಾಣ್ಯ ಹಾಗೂ ನೋಟುಗಳ ದೊಡ್ಡ ಸಂಗ್ರಹವೇ ಇದೆ.

ಅಜಯ್ ರಾವ್ ಪಟ್ಟಣದ ಖ್ಯಾತ ವಕೀಲ ದಿ.ಎಂ.ಕೆ. ನಾರಾಯಣ ರಾವ್ ಹಾಗೂ ದಿ.ಎಂ.ಎನ್. ಚಂದ್ರಕಲಾ ರಾವ್ ದಂಪತಿಯ ನಾಲ್ವರು ಮಕ್ಕಳಲ್ಲಿ ಕೊನೆಯವರು. ಕೃಷಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಇವರು ಪ್ರವೃತ್ತಿಯಿಂದ ನಾಣ್ಯ ಹಾಗೂ ನೋಟು ಸಂಗ್ರಾಹಕ. ಕಳೆದ 10 ವರ್ಷಗಳಿಂದ ಈ ಹವ್ಯಾಸವನ್ನು ಬೆಳೆಸಿಕೊಂಡು ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳ 4 ಸಾವಿರಕ್ಕೂ ಅಧಿಕ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸಿದ್ದಾರೆ.

ಕಂಪ್ಯೂಟರ್ ವಿಜ್ಞಾನದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಮುಗಿಸಿರುವ ಅಜಯ್ ರಾವ್ ತಮ್ಮ ತಂಡದೊಂದಿಗೆ ವಿವಿಧೆಡೆಗಳಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ.

ಭಾರತ, ಫ್ರಾನ್ಸ್, ನೈಜೀರಿಯಾ, ಕಾಂಬೋಡಿಯಾ, ಆಸ್ಟ್ರೀಯಾ, ಅಮೆರಿಕ, ಜಪಾನ್, ಚೀನಾ, ಟರ್ಕಿ, ಮೆಕ್ಸಿಕೊ, ಕಾಂಗೋ, ಸೈಪ್ರಸ್, ಈಜಿಪ್ಟ್, ಇಥಿಯೋಪಿಯಾ, ಗ್ರೀಕ್ ಸೇರಿದಂತೆ ವಿಶ್ವದ 190ಕ್ಕೂ ಹೆಚ್ಚು ದೇಶಗಳ ಹಳೆಯ ನಾಣ್ಯ ಹಾಗೂ ನೋಟುಗಳು ಇವರ ಸಂಗ್ರಹದಲ್ಲಿದೆ.

ಮೌರ್ಯರ ಕಾಲದ ನಾಣ್ಯಗಳು, ಬ್ರಿಟಿಷರ ಕಾಲದ ಸಾಕಷ್ಟು ನಾಣ್ಯಗಳು ಸೇರಿದಂತೆ ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಚಲಾವಣೆಗೊಂಡ ಬೇರೆ ಬೇರೆ ಮುಖಬೆಲೆಯ ಬಗೆ ಬಗೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.

12ನೇ ಶತಮಾನದ ಉತ್ತರ ಭಾರತದ ರಾಜ ಚೌಹಾಣರು ಟಂಕಿಸಿದ ಅಪರೂಪದ ರಾಮಪಟ್ಟಾಭಿಷೇಕದ ನಾಣ್ಯ, ಮೊಘಲ್, ಟಿಪ್ಪು ಸುಲ್ತಾನ್, ನಿಜಾಮ, ವೀರರಾಜೇಂದ್ರ, ಬ್ರಿಟಿಷರು, ಪೋರ್ಚುಗೀಸರು ಸೇರಿದಂತೆ ಅನೇಕ ರಾಜವಂಶಗಳ ಕಾಲದ ನಾಣ್ಯಗಳೂ ಇವರ ಬಳಿಯಲ್ಲಿವೆ.

ಡಾಲರ್, ಯೂರೋ, ದಿನಾರ್‌ಗಳು, ಈವರೆಗೆ ದೇಶದಲ್ಲಿ ಚಲಾವಣೆಗೊಂಡ ಬಹುತೇಕ ಮಾದರಿಯ ನೋಟುಗಳನ್ನು ಸಂಗ್ರಹಿಸಿದ್ದಾರೆ. ರಿಸರ್ವ್ ಬ್ಯಾಂಕ್‌ ಗವರ್ನರ್ ಆಗಿದ್ದ ಬಹುತೇಕ ಗವರ್ನರ್‌ಗಳ ಸಹಿ ಹೊಂದಿರುವ ವಿವಿಧ ಮೌಲ್ಯದ ಬಗೆಬಗೆಯ ನೋಟುಗಳನ್ನು ಸಂಗ್ರಹಿಸಿರುವುದು ಮತ್ತೊಂದು ವೈಶಿಷ್ಠ್ಯ. ಜತೆಗೆ, ವಿವಿಧ ಬಗೆಯ ಫ್ಯಾನ್ಸಿ ನಂಬರ್ ಹೊಂದಿರುವ ನೋಟುಗಳೂ ಇವೆ.

ಈ ಕುರಿತು ಮಾತನಾಡಿದ ಅಜಯ್ ರಾವ್, ‘ಹಳೆಯ ನೋಟು ಹಾಗೂ ನಾಣ್ಯಗಳನ್ನು ಹಲವು ಊರುಗಳಿಗೆ ಹೋಗಿ ಖರೀದಿಸಿ ತರುತ್ತೇನೆ. ಕೆಲವು ವೇಳೆ ಹಳೆಯ ನಾಣ್ಯ ಹಾಗೂ ನೋಟುಗಳನ್ನು ಕೊಡುತ್ತೇನೆಂದವರ ಮಾತನ್ನು ನಂಬಿ ಹೋದಾಗ ನಿರಾಸೆ ಅನುಭವಿಸಿದ್ದೂ ಇದೆ. ಜತೆಗೆ, ಪರಿಚಯದ ವ್ಯಕ್ತಿಗಳೇ ಅಧಿಕ ಸಂಖ್ಯೆಯಲ್ಲಿ ನಾಣ್ಯ ಹಾಗೂ ನೋಟುಗಳನ್ನು ನೀಡಿದ್ದಾರೆ’ ಎಂದು ಹೇಳಿದರು.

ಕೆಲವೊಮ್ಮೆ ಇವರು ಹಳೆಯ ನೋಟು ಹಾಗೂ ನಾಣ್ಯಕ್ಕಾಗಿ ಸಾಕಷ್ಟು ಹಣ ತೆತ್ತದ್ದೂ ಇದೆ. ಹಲವೆಡೆಗಳಲ್ಲಿ ಈಗಾಗಲೇ ಹಳೆ ನೋಟು-ನಾಣ್ಯಗಳ ಪ್ರದರ್ಶನವನ್ನು ಕೂಡಾ ಆಯೋಜಿಸಿದ್ದಾರೆ. ನಾಣ್ಯ ಹಾಗೂ ನೋಟು ಸಂಗ್ರಹದಲ್ಲಿ ದಾಖಲೆ ನಿರ್ಮಿಸಬೇಕೆಂಬ ಕನಸನ್ನು ಹೊಂದಿರುವ ಇವರು ಇವುಗಳನ್ನು ಪ್ರದರ್ಶನಕಿಟ್ಟು ಬಂದ ಹಣವನ್ನು ಅನಾಥ, ಅಂಗವಿಕಲ ಹಾಗೂ ಅಂಧ ಮಕ್ಕಳಿಗೆ ನೀಡುವ ಉದ್ದೇಶ ಹೊಂದಿದ್ದಾರೆ. ಇವರ ಸಾಧನೆಯನ್ನು ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕವು ಇವರನ್ನು ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT