ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದ್ದು, ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ.
ತಿತಿಮತಿ ವ್ಯಕ್ತಿಯ ಸಂಪರ್ಕದಿಂದ 7 ಮಂದಿಗೆ ಸೋಂಕು ತಗುಲಿದೆ.ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಮಹಿಳೆ, ಗೋಣಿಕೊಪ್ಪಲಿನಲ್ಲಿ ನೆಲೆಸಿರುವ 55 ವರ್ಷದ ಮಹಿಳೆ, ಕುಟ್ಟ ಗ್ರಾಮದ 34 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಮೂರು ಹೆಚ್ಚುವರಿ ನಿಯಂತ್ರಿತ ವಲಯ ಸ್ಥಾಪಿಸಲಾಗಿದೆ.
ಕೊರೊನಾಗೆ ಮೊದಲ ಬಲಿ
ಕೊಡಗಿನಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದರ ಬೆನ್ನಲ್ಲೇ ಸೊಂಕಿತ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನ ಪೇಟೆಯ 58 ವರ್ಷದ ವ್ಯಕ್ತಿ ಮೃತಪಟ್ಟವರು.
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕುಶಾಲನಗರ ಖಾಸಗಿ ಆಸ್ಪತ್ರೆಯಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಸಂಜೆ 4.30ಕ್ಕೆ ಅವರು ಮೃತಪಟ್ಟಿದ್ದಾರೆ. ಅವರು 10 ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು.
ಕೋವಿಡ್ ಪರೀಕ್ಷಾ ವರದಿ ಭಾನುವಾರ ಬಂದಿದ್ದು, ಸೋಂಕು ತಗುಲಿರುವುದು ದೃಢವಾಗಿದೆ.
‘ಇದು ಕೊರೊನಾದಿಂದ ಜಿಲ್ಲೆಯಲ್ಲಿ ಮೊದಲ ಸಾವಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜನ ಭಯಪಡ ಬಾರದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.