ಸಿದ್ದಾಪುರ (ಕೊಡಗು ಜಿಲ್ಲೆ): ಅಭ್ಯತ್ ಮಂಗಲ ಗ್ರಾಮದಲ್ಲಿ ಸರಕಾರಿ ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು.
ಅಭ್ಯತ್ ಮಂಗಲ ಗ್ರಾಮ ಸ.ನಂ 87/2, 87/4 ರಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಗಿತ್ತು. ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತೆರವು ಕಾರ್ಯಾಚರಣೆಯ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದರು. ಖುದ್ದು ಒತ್ತುವರಿ ತೆರವು ಜಾಗದ ಗಡಿಯನ್ನು ಕಾಲ್ನಡಿಗೆ ಮೂಲಕ ತೆರಳಿ ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರವಾಹದಲ್ಲಿ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ಸಲುವಾಗಿ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ಕಾಫಿ ಗಿಡಗಳ ತೆರವಿನ ನಂತರ ಪಟ್ಟಣ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ, ನಿವೇಶನವನ್ನು ವಿಂಗಡಿಸುತ್ತಾರೆ. ಬಳಿಕ ಸಂತ್ರಸ್ತರಿಗೆ ಜಾಗವನ್ನು ಹಸ್ತಾಂತರಿಸಿ, ವಸತಿ ಯೋಜನೆಯ ಮೂಲಕ ಸೂರು ಕಲ್ಪಿಸಲಾಗುದು. ತಾತ್ಕಾಲಿಕ ಶೆಡ್ ನಿರ್ಮಿಸುವ ಬಗ್ಗೆಯೂ ಚಿಂತಿಸಲಾಗಿದೆ ಎಂದರು.
ಈ ಸಂದರ್ಭ ಡಿ.ಡಿ.ಎಲ್.ಆರ್ ಶ್ರೀನಿವಾಸ್, ಎ.ಡಿ.ಎಲ್.ಆರ್ ಶಂಶುದ್ದೀನ್, ಉಪ ತಹಶಿಲ್ದಾರ್ ಚನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ಪಿಡಿಒ ಅನಿಲ್ ಕುಮಾರ್ ಇದ್ದರು