ಶನಿವಾರಸಂತೆ: ಅಪಘಾತಗಳನ್ನು ತಡೆಯಲು ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಲು ಹಾಗೂ ರಸ್ತೆ ಅಂಚಿನ ಕಳೆ ಗಿಡಗಳನ್ನು ತೆಗೆಸಲು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲು ಇಲ್ಲಿ ಸೋಮವಾರ ನಡೆದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ನಿರ್ಧರಿಸಿತು.
ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿವೆ. ಮುಂದೆ ಇವುಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆಯಿಷಾ ಅವರು ಗ್ರಾಮ ಪಂಚಾಯಿತಿ ಅಭಿವೃದ್ದಿ ಕಾಮಗಾರಿ ಕುರಿತಾದ ಕ್ರಿಯಾ ಯೋಜನೆ, ಸರ್ಕಾರದಿಂದ ಬಂದ ಆದೇಶ ಪತ್ರಗಳ ಬಗ್ಗೆ ಮಾಹಿತಿ ನೀಡಿದರು. ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಸದಸ್ಯರು ಚರ್ಚಿಸಿದರು.
ಅನುದಾನದ ಕೊರತೆಯ ನಡುವೆ ಕಾರ್ಮಿಕರಿಗೆ ವೇತನ ನೀಡುತ್ತಿರುವ ವಿಷಯವೂ ಚರ್ಚೆಗೆ ಬಂದಿತು. ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಬಗ್ಗೆ, ಗ್ರಾಮಸಭೆ ನಡೆಸುವ ಬಗ್ಗೆ, ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ.ಗಿರೀಶ್, ಡಿ.ಬಿ.ಬೋಜಪ್ಪ, ಎಸ್.ಪಿ.ಭಾಗ್ಯ, ದೇವರಾಜ್, ನಂದಿನಿ ನಾಗರತ್ನ, ಭವಾನಿ ಪಿಡಿಒ ಎಂ.ಕೆ.ಆಯಿಷಾ ಇದ್ದರು.
ನ. 29ರಂದು ಕರೆದಿದ್ದ ಸಾಮಾನ್ಯ ಸಭೆಯನ್ನು ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ಸೋಮವಾರ ನಡೆದ ಸಾಮನ್ಯ ಸಭೆಗೆ ಅಧ್ಯಕ್ಷೆ ಸತ್ಯವತಿ ಸೇರಿದಂತೆ ಆಡಳಿತರೂಢ 8 ಮಂದಿ ಸದಸ್ಯರು ಭಾಗವಹಿಸಿದ್ದರು.