ಮಡಿಕೇರಿ: ಸತತ ಎರಡನೇ ವರ್ಷವೂ ಮಹಾಮಳೆ ಸಂಕಷ್ಟಕ್ಕೆ ತುತ್ತಾದ ಕೊಡಗಿನಲ್ಲಿ ಶಾಲಾ ಕಟ್ಟಡಗಳ ಸ್ಥಿತಿಯೂ ಶೋಚನೀಯವಾಗಿದೆ. ಹಲವು ಶಾಲಾ ಕಟ್ಟಡಗಳು ಈಗಲೋ– ಆಗಲೋ ಬೀಳುವ ಹಂತದಲ್ಲಿವೆ. ಈ ಅಪಾಯದ ನಡುವೆಯೇ ಮಕ್ಕಳು ಕಲಿಯುತ್ತಿದ್ದಾರೆ.
ಈ ವರ್ಷದ ಮಳೆ ಹಾಗೂ ಪ್ರವಾಹದಿಂದ, ಅಂದಾಜು 161 ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಅದರಲ್ಲಿ 39 ಕಟ್ಟಡಗಳು ಅತ್ಯಂತ ಅಪಾಯಕಾರಿಯಾಗಿವೆ. ಗಾಳಿ, ಮಳೆಗೆ ಹೆಂಚುಗಳೇ ಹಾರಿ ಹೋಗಿ ಸಣ್ಣ ಮಳೆಗೂ ಸೋರುತ್ತಿವೆ. ಆರ್.ಸಿ.ಸಿ ಕಟ್ಟಡದಲ್ಲೂ ನೀರು ಜಿನುಗುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹ 2.52 ಕೋಟಿಗೆ ಶಿಕ್ಷಣ ಇಲಾಖೆ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ.
ಕೊಡಗಿನ ಶಾಲೆಗಳು ಮಳೆಗಾಲದಲ್ಲಿ ಹತ್ತಾರು ಸಮಸ್ಯೆಗಳಿಗೆ ಒಡ್ಡಿಕೊಳ್ಳುತ್ತಿದ್ದು ಶಾಶ್ವತ ಪರಿಹಾರ ಸಿಕ್ಕಿಲ್ಲ.
ಸಿದ್ದಾಪುರ ಭಾಗದಲ್ಲಿ ಕಾವೇರಿ ನದಿಯು ಉಕ್ಕೇರಿದ್ದರ ಪರಿಣಾಮ ಹಲವು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ನೆಲ್ಯಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲೇ ಈಗಲೂ 64 ಕುಟುಂಬಗಳ 173 ಮಂದಿ ಆಶ್ರಯ ಪಡೆದಿದ್ದು, ಅವರ ಪೈಕಿ 35 ವಿದ್ಯಾರ್ಥಿಗಳೂ ಇದ್ದಾರೆ. ಶಾಲೆಯೇ ಪರಿಹಾರ ಕೇಂದ್ರವಾಗಿ ಬದಲಾದ ಪರಿಣಾಮ, ಆ ಶಾಲೆಗೆ ಬರುವ ವಿದ್ಯಾರ್ಥಿಗಳು ಗದ್ದಲದಲ್ಲಿ ಪಾಠ ಕೇಳುತ್ತಿದ್ದಾರೆ.