ಮಡಿಕೇರಿ: ಒಂದೆಡೆ ಡಿಜಿಟಲ್ ಗ್ರಂಥಾಲಯ, ಮಕ್ಕಳಿಗೆ ಓದಲು 8 ಸಾವಿರ ಪುಸ್ತಕಗಳು, ಆಟವಾಡುವುದಕ್ಕೆ ಆಟಿಕೆಗಳು, ಹಿರಿಯ ನಾಗರಿಕರಿಗೆ ವಿಶ್ರಮಿಸಲು ಪ್ರತ್ಯೇಕ ಕೊಠಡಿ, ಸುಂದರ ಉದ್ಯಾನ... ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ವಿಶೇಷಗಳನ್ನು ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿಯಲ್ಲಿ ಕಾಣಬಹುದು.
ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸೇರಿದಂತೆ ವಿವಿಧ ಯೋಜನೆಯಡಿ ಸುಸಜ್ಜಿತವಾದ ಕಟ್ಟಡವನ್ನು ಮಂಗಳವಾರ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಡಾ.ಮಂತರ್ಗೌಡ ಜೊತೆಯಾಗಿ ಉದ್ಘಾಟಿಸಿದರು.
₹ 47 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಹಲವು ಬಗೆಯ ವಿಶೇಷಗಳಿದ್ದು, ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, 8 ಸಾವಿರಕ್ಕೂ ಅಧಿಕ ಪುಸ್ತಕವುಳ್ಳ ಮಕ್ಕಳಸ್ನೇಹಿ ಗ್ರಂಥಾಲಯ, ಮಕ್ಕಳಿಗಾಗಿ ಚೆಸ್, ಲುಡೊ, ಕೇರಂ ಮೊದಲಾದ ಆಟಿಕೆಗಳು, ಸುಸಜ್ಜಿತವಾದ ಆಸನ ವ್ಯವಸ್ಥೆ ಇದೆ. ತಾಯಂದಿರು ಮಕ್ಕಳಿಗೆ ಹಾಲುಣಿಸಲು ಹಾಗೂ ಹಿರಿಯ ನಾಗರಿಕರಿಗೆ ಸುಧಾರಿಸಿಕೊಳ್ಳುವುದಕ್ಕೆ ಕ್ಷೇಮಕೊಠಡಿಯನ್ನೂ ತೆರೆಯಲಾಗಿದೆ.
ಪುರುಷರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಭೆಗಳನ್ನು ನಡೆಸುವುದಕ್ಕೆ ವಿಶಾಲವಾದ ‘ಸಂಜೀವಿನಿ’ ಸಭಾಂಗಣವಿದ್ದು, ಅಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಅವಕಾಶ ಇದೆ.
ಗಾಳಿಬೀಡು ವ್ಯಾಪ್ತಿಯಲ್ಲಿರುವ ಅರಮನೆ ಕೆರೆ, ವಣಚಲು ಫಾಲ್ಸ್, ನಿಶಾನಿ ಬೆಟ್ಟ, ಚಪ್ಪಂಡ ಕೆರೆ, ಮಾಂದಲ್ ಪಟ್ಟಿ ಮೊದಲಾದ ಪ್ರವಾಸಿ ಸ್ಥಳಗಳ ಮಾಹಿತಿ ಮತ್ತು ಚಿತ್ರಗಳನ್ನು ಹಾಕಲಾಗಿದೆ. ಗಾಳಿಬೀಡು, ಹಮ್ಮಿಯಾಳ, ಕಾಲೂರು, 2ನೇ ಮೊಣ್ಣಂಗೇರಿ ಗ್ರಾಮಗಳಲ್ಲಿರುವಂತಹ ಪ್ರಾಚೀನ ದೇಗುಲದ ಕುರಿತ ಚಿತ್ರ ಮತ್ತು ಮಾಹಿತಿಯನ್ನೂ ಇಲ್ಲಿ ಹಾಕಲಾಗಿದೆ.
ಆವರಣದಲ್ಲಿ ಉದ್ಯಾನವಿದ್ದು, ಇಲ್ಲಿನ ಹಸಿರು ಗಮನ ಸೆಳೆಯುವಂತಿದೆ. ಪಂಚಾಯಿತಿಯ ವಿವಿಧ ಯೋಜನೆಗಳ ಮಾಹಿತಿ, ಕೈಗೊಂಡ ಕಾಮಗಾರಿಗಳ ವಿವರಗಳನ್ನು ಪ್ರದರ್ಶಿಸಲೆಂದೇ ಆ್ಯಂಡ್ರಾಯ್ಡ್ ಬೃಹತ್ ಟಿ.ವಿ ಪರದೆಯೂ ಇಲ್ಲಿದೆ.
ಇದರೊಂದಿಗೆ ನೋಟಿಸ್ ಫಲಕ, ಸಲಹಾ ಪೆಟ್ಟಿಗೆ, ಅಗ್ನಿನಂದಕ ಉಪಕರಣ, ಪ್ರಥಮಚಿಕಿತ್ಸೆ ಕಿಟ್ಗಳನ್ನು ಅಳವಡಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಮತ್ತು ಶಾಸಕರ ಜೊತೆಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಉಪಾಧ್ಯಕ್ಷ ಪೆಮ್ಮಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಪಿಡಿಒ ಶಶಿಕಿರಣ ಭಾಗವಹಿಸಿದ್ದರು.
ಮಡಿಕೇರಿ ಕ್ಷೇತ್ರಕ್ಕೆ ಒಂದು ಸಾವಿರ ಮನೆ ಮಂಜೂರು
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ಮಾತನಾಡಿ ‘ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಮನೆ ನಿರ್ಮಾಣಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ಅನುಮೋದನೆ ನೀಡಿದ್ದು ವಸತಿ ಇಲ್ಲದ ನಿವೇಶನ ಇರುವವರ ಕುರಿತು ಗ್ರಾಮ ಪಂಚಾಯಿತಿ ಮೂಲಕ ಪಟ್ಟಿ ಒದಗಿಸಬೇಕು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು. ಮಡಿಕೇರಿ ನಗರಕ್ಕೆ ನೀರು ಪೂರೈಕೆಯಾಗುವ ಕೂಟುಹೊಳೆ ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯಿಂದ ₹ 300 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಿದ್ದು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸುವಂತೆ ತಿಳಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಬೇಕು. ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸಬೇಕು. ₹ 47 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲಾಗಿದ್ದು ಉತ್ತಮವಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ಸೋಮಯ್ಯ ಮಾತನಾಡಿ ‘ಡಿಜಿಟಲ್ ಗ್ರಂಥಾಲಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿ ಸಭಾ ಕೊಠಡಿ ಸಭೆ ಸಮಾರಂಭ ನೆರವೇರಿಸಲು ಸಭಾಂಗಣ ಹೀಗೆ ಹಲವು ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಗ್ರಾಮ ಪಂಚಾಯಿತಿ ಭವನ ನಿರ್ಮಾಣ ಆಗಿದೆ’ ಎಂದರು.
ಕೇಂದ್ರ ಸರ್ಕಾರದಿಂದ ಗ್ರಾ.ಪಂಗೆ ನೇರ ಅನುದಾನ
ಸಂಸದ ಕೇಂದ್ರ ಸರ್ಕಾರದಿಂದ ಪ್ರತೀ ಗ್ರಾಮ ಪಂಚಾಯಿತಿಗೆ ₹ 38 ಲಕ್ಷನಷ್ಟು ಅನುದಾನ ನೇರವಾಗಿ ಬಿಡುಗಡೆಯಾಗುತ್ತಿದ್ದು ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸಬಲತೆ ಹೊಂದುವುದಕ್ಕೆ ಸಹಕಾರಿ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು. ಕೇಂದ್ರದ 14-15ನೇ ಹಣಕಾಸು ಆಯೋಗದಿಂದ ಪಂಚಾಯತ್ ಸೇವಾ ಕೇಂದ್ರದಡಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು ವಿದ್ಯುತ್ ಸಂಪರ್ಕ ಗ್ರಾಮೀಣ ರಸ್ತೆ ಚರಂಡಿ ಮತ್ತಿತರ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು. ಗಾಳಿಬೀಡು ಗ್ರಾಮ ಪಂಚಾಯಿತಿ ಸೇರಿದಂತೆ ಕೊಡಗು ಜಿಲ್ಲೆಯ 60ಕ್ಕೂ ಹೆಚ್ಚು ಕಡೆಗಳಲ್ಲಿ ಮೊಬೈಲ್ ಟವರ್ಗಳನ್ನೂ ನಿರ್ಮಾಣ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ‘ಮೈಸೂರು- ಬೆಂಗಳೂರು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಶ್ರಿರಂಗಪಟ್ಟಣ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಂಪಾಜೆ- ಮಾಣಿ ರಸ್ತೆ ಅಭಿವೃದ್ಧಿ ಹಾಗೂ ಕರಿಕೆ-ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಅಮೃತ ಯೋಜನೆಯಡಿ ₹ 146 ಕೋಟಿ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.