ಮಡಿಕೇರಿ: ಕರಗೋತ್ಸವವು ತೋರಣ ಕಟ್ಟುವ ಮೂಲಕ ಆರಂಭವಾಗಿದ್ದ ನವರಾತ್ರಿಯ ಉತ್ಸವವು ದಶಮಂಟಪೋತ್ಸವದ ಶೋಭಾಯಾತ್ರೆಯ ಮೂಲಕ ತೆರೆ ಕಂಡಿತು.
ಸತತ 9 ದಿನಗಳ ಕಾಲ ನಗರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವವೂ ಈ ಮೂಲಕ ಸಂಪನ್ನಗೊಂಡಿತು. ಅಪಾರ ಜನಸ್ತೋಮ ಈ ಉತ್ಸವಗಳ ರಸದೌತಣವನ್ನು ಸವಿಯಿತು.
ನವರಾತ್ರಿಯ ಅಂತಿಮ ಘಟ್ಟವಾದ ವಿಜಯದಶಮಿಯ ರಾತ್ರಿ ಇಡೀ ನಗರ ಎಚ್ಚರಗೊಂಡಿತ್ತು. ಇಲ್ಲಿನ ಜನರು ನಿದ್ರಿಸದೇ ಮಂಟಪದಿಂದ ಮಂಟಪಕ್ಕೆ ಸುತ್ತಿದರು. ಹೊರಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಲಕ್ಷಾಂತರ ಜನರ ಹರ್ಷೋದ್ಗಾರಗಳ ನಡುವೆ ಹತ್ತು ಮಂಟಪಗಳೂ ಒಂದಾದ ಮೇಲೊಂದರಂತೆ ಬೆಳಕಿನ ಹೊಳೆಯಲ್ಲಿ ತೇಲಿದವು.
ಬುಧವಾರ ಬೆಳಿಗ್ಗೆ ಸೂರ್ಯೋದಯವಾದಾಗಲೂ ಜನರ ಉತ್ಸಾಹಕ್ಕೆ ಬರ ಇರಲಿಲ್ಲ. ಹುಮ್ಮಸ್ಸಿನಿಂದಲೇ ಮಂಟಪಗಳೂ ಗುರಿ ಎಡೆಗೆ ಸಾಗಿದವು. ಬನ್ನಿಮಂಟಪದಲ್ಲಿ ಬನ್ನಿ ತೆಗೆದು ಮೆರವಣಿಗೆಯನ್ನು ಮುಗಿಸಿದವು.
ಮೈನವಿರೇಳಿಸುವ ಪ್ರದರ್ಶನದೊಂದಿಗೆ ಈ ಮಂಟಪಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆದವು. ಒಂದೊಂದು ಮಂಟಪಗಳೂ ಒಂದೊಂದು ಬಗೆಯಲ್ಲಿ ವಿನೂತನವಾದ ಪ್ರದರ್ಶನ ತೋರುತ್ತ ಚಲಿಸುತ್ತಿದ್ದರೆ ಸೇರಿದ್ದ ಅಪಾರ ಜನಸ್ತೋಮ ನಿಬ್ಬೆರಗಿನಿಂದ ವೀಕ್ಷಿಸಿತು.
ಈ ಬಾರಿಯ ಶೋಭಾಯಾತ್ರೆಯಲ್ಲಿ ಕೋದಂಡ ರಾಮ ದೇಗಲವು ರೂಪಿಸಿದ್ದ ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆಯ ಪ್ರಸಂಗದ ಕಥಾವಸ್ತುವಿನ ಮಂಟಪವು 89.05 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿತು. ಕೋಟೆ ಗಣಪತಿ ಹಾಗೂ ಕೋಟೆ ಮಾರಿಯಮ್ಮ ದೇಗುಲ ಮಂಟಪಗಳು ತಲಾ 88.05 ಅಂಕ ಪಡೆಯುವ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದುಕೊಂಡವು. ಕರವಲೆ ಭಗವತಿ ದೇಗುಲವು 84.05 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದವು.
ಪ್ರತಿ ವರ್ಷದಂತೆ ಈ ವರ್ಷವೂ ನುಸಕಿನ ವೇಳೆಯಲ್ಲಿ ನಡೆದ ಬಹುಮಾನ ಘೋಷಣೆಯ ಸಂದರ್ಭದಲ್ಲಿ ವಿವಿಧ ಮಂಟಪಗಳ ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪೇಟೆ ಶ್ರೀರಾಮಮಂದಿರದ ಮಂಟಪವು ಮೊದಲಿಗೆ ಹೊರಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ನಂತರ, ಒಂದರ ನಂತರ ಮತ್ತೊಂದರಂತೆ ಮಂಟಪಗಳು ನಿಧಾನಗತಿಯಲ್ಲಿ ಹೊರಡಲು ಅನುವಾದವು. ಅಲ್ಲಲ್ಲಿ ಕೆಲವೊಂದು ಪ್ರದರ್ಶನಗಳನ್ನು ತೋರುತ್ತಾ ಹೊರಟ ಈ ಮಂಟಪಗಳ ವಿಸ್ತಾರತೆಯನ್ನು ಕಂಡ ಜನ ವಿಸ್ಮಯಗೊಂಡರು.
ಕೋಟೆ ಗಣಪತಿ ದೇಗುಲದ ಪ್ರದರ್ಶನದ ವೇಳೆ ಶತಮಾಹಿಷೆ ರಾಕ್ಷಸಿಯ ಬೃಹತ್ ಆಕಾರದ ತಲೆ ಮತ್ತು ಎರಡು ಕೈಗಳು ಒಮ್ಮೆಗೆ ಮಂಟಪದಲ್ಲಿ ಮೇಲೆದ್ದ ದೃಶ್ಯ ಕಂಡು ಸುತ್ತಲೂ ಸೇರಿದ್ದ ಜನರು ಒಂದರೆಗಳಿಗೆ ಬೆಚ್ಚಿದರು. ಯುದ್ಧದ ಸಂದರ್ಭದಲ್ಲಿ ಪುಟಿದೆದ್ದ ಬಾಣಬಿರುಸುಗಳು ಇಡಿ ಶೋಭಾಯಾತ್ರೆಗೆ ಮೆರುಗು ತುಂಬಿದವು.
ದೇಚೂರು ಶ್ರೀರಾಮಮಂದಿರದ ಮಂಟಪದಲ್ಲಿ ಕೇಳಿ ಬಂದ ಮಧು ಖೈಟಬರ ಗಹಗಹಿಸುವ ನಗುವಿನ ಅಬ್ಬರ, ದಂಡಿನ ಮಾರಿಯಮ್ಮ ದೇವಾಲಯದ ಮಂಟಪದಲ್ಲಿ ಜಲಂಧರನನ್ನು ಸಂಹರಿಸಲು ಶಿವನು ರೌದ್ರಾವತಾರ ತಳೆದದ್ದು ವಿಜೃಂಭಣೆಯಿಂದ ಮೂಡಿ ಬಂತು.
ಕರವಲೆ ಭಗವತಿ ಮಹಿಷ ಮರ್ದಿನಿ ದೇಗುಲ ಮಂಟಪವು ಪ್ರಸ್ತುತಪಡಿಸಿದ ಉಗ್ರ ನರಸಿಂಹನಿಂದ ಹಿರಣ್ಯಕಶಿಪನ ಸಂಹಾರ ಕಥಾಪ್ರಸಂಗದಲ್ಲಿ ಉಗ್ರನರಸಿಂಹನ ಆಕೃತಿಯು ಭವ್ಯವಾಗಿ ಕಂಡಿತು. ಕೊನೆಯಲ್ಲಿ ಉಗ್ರ ನರಸಿಂಹನ ಬೃಹತ್ ಮೂರ್ತಿಯನ್ನು ಪ್ರೇಕ್ಷಕರು ದೃಷ್ಟಿ ಕದಲದಂತೆ ನೋಡಿದರು.
ಕೋಟೆ ಮಾರಿಯಮ್ಮ ದೇಗುಲ ಮಂಟಪದಲ್ಲಿ ಪಂಚಮುಖಿ ಆಂಜನೇಯನಿಂದ ಅಹಿರಾವಣ ಮಹಿರಾವಣರ ವಧೆ ಪ್ರಸಂಗದಲ್ಲಿ ಅದ್ಭುತವಾದ ವಿನ್ಯಾಸಗಳು ಗಮನ ಸೆಳೆದವು. ‘ನಾನೇ ಅಹಿ ರಾವಣ’ ಎಂದು ಹೇಳುತ್ತಾ ಬೃಹತ್ ರಾಕ್ಷಸಾಕೃತಿ ಅದಕ್ಕೆ ಹೂಕುಂಡಗಳ ಪ್ರಭಾವಳಿಗಳನ್ನು ನೋಡಗರು ಎವೆಯಿಕ್ಕದೇ ವೀಕ್ಷಿಸಿದರು.
ಚೌಡೇಶ್ವರಿ ದೇವಾಲಯದ ಮಂಟಪವು ಕಟೀಲು ಕ್ಷೇತ್ರ ಮಹಾತ್ಮೆಯನ್ನು ಪ್ರಸ್ತುತಪಡಿಸಿತು. ಇದರಲ್ಲಿ ಶುಂಭ ನಿಶುಂಭರ ಸಾವಿನ ನಂತರ ಅವರ ಮಂತ್ರಿ ಅರುಣಾಸುರ ಬ್ರಹ್ಮನಿಂದ ವರ ಪಡೆದಾಗ ಗಹಗಹಿಸಿ ನಕ್ಕ ಪ್ರಸಂಗ, ನಂತರ ಗಾಳಿಯಲ್ಲಿ ತೇಲಿದಂತೆ ಬಂದ ಭ್ರಮರಾಂಬಿಕೆಯ ಮೂರ್ತಿಗಳು ಸೂಜಿಗಲ್ಲಿನಂತೆ ಸೆಳೆದವು.
ಇನ್ನುಳಿದಂತೆ, ಕಂಚಿಕಾಮಾಕ್ಷಿ ದೇಗುಲ ಮಂಟಪದಲ್ಲಿ ಶಿವ ಮತ್ತು ತ್ರಿಪುರಾಸುರನ ಕಾಳಗಗಳು, ಕೋದಂಡರಾಮ ದೇಗುಲವು ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆಯ ಪ್ರಸಂಗವನ್ನು ಅದ್ದೂರಿಯಾಗಿ ಪ್ರದರ್ಶಿಸಿದ್ದನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.