ಗೋಣಿಕೊಪ್ಪಲು: ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಮಂಗಳವಾರ ನಡೆದ ಮಂಡೇಪಂಡ ಸುಬ್ರಮಣಿ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಜಿಎಎಸ್ಪಿ ತಂಡ ಜಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ಜಿಎಸ್ಪಿ ತಂಡ ಲಯನ್ಸ್ ತಂಡದ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತು. ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ ಜಿಎಸ್ಪಿ ತಂಡದ ಆಟಗಾರ ಕೌಶಿಕ್ 3ನೇ ನಿಮಿಷದಲ್ಲಿ ಮಿಂಚಿನ ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಎಚ್ಚೆತ್ತುಕೊಂಡ ಲಯನ್ಸ್ ತಂಡ ರಜತ್ ಅವರು 13ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಪಂದ್ಯ ಸಮಗೊಳಿಸಿಕೊಂಡಿತು. ಆ ನಂತರ ಉಭಯ ತಂಡಗಳು ಗೋಲು ಗಳಿಸಿ ಜಯಸಾಧಿಸಲು ಹರಸಾಹಸ ಪಟ್ಟವು.
ಜಿಎಸ್ಪಿ ತಂಡದ ನಾಚಪ್ಪ 19ನೇ ನಿಮಿಷದಲ್ಲಿ ಉತ್ತಮ ಗೋಲು ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಇದರಿಂದ ಲಯನ್ಸ್ ತಂಡ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಬಾಲಕಿಯರ ವಿಭಾಗದಲ್ಲಿ ಜಿಎಸ್ಪಿ ತಂಡ ಚಿನ್ಮಯಿ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ತುಷಾರ ಪಂದ್ಯ ಆರಂಭದ 4ನೇ ನಿಮಿಷದಲ್ಲೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಂಡರು. ಅಭಿನಂದನಾ 6, ಕೀರ್ಥನಾ 9 ನೇ ನಿಮಿಷದಲ್ಲಿ ಗೋಲು ಹೊಡೆದು ತಂಡ ಸುಸ್ಥಿತಿಗೆ ತಂದರು.
ಜಿಎಸ್ಪಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಲು ನಡೆಸಿದ ಚಿನ್ಮಯಿ ತಂಡದ ಪ್ರಯತ್ನ ವಿಫಲವಾಯಿತು. 2ನೇ ಸ್ಥಾನಕ್ಕೆ ತೃಪ್ತಿಪಬೇಕಾಯಿತು.