ಗೋಣಿಕೊಪ್ಪಲು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸೇರಿದಂತೆ ಬಾಳೆಲೆ, ಕಾರ್ಮಾಡು, ಪೊನ್ನಪ್ಪಸಂತೆ, ಗೋಣಿಕೊಪ್ಪಲು, ಮಾಯಮುಡಿ ಭಾಗಕ್ಕೆ ಭಾನುವಾರ ಬೆಳಗಿನಿಂದಲೇ ಧಾರಾಕಾರ ಮಳೆ ಸುರಿಯಿತು.
ದಟ್ಟ ಮೋಡ ಕವಿದ ವಾತಾವರಣದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಜಿನುಗು ಮಳೆ ಸುರುವಾಯಿತು. ಬಳಿಕ 11 ಗಂಟೆ ಯಿಂದ 1.30 ರ ತನಕ ಒಂದೇ ಸಮನೆ ರಭಸದ ಮಳೆ ಸುರಿಯಿತು. ಬಾಳೆಲೆ ಭಾಗಗಕ್ಕೆ ಬಿದ್ದ ರಭಸದ ಮಳೆಗೆ ಅಲ್ಲಿನ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಡ್ಡಿಯಾಯಿತು.
ಮೈದಾನದ ತುಂಬ ನೀರು ತುಂಬಿ ಹೊಳೆಯಂತೆ ಕಂಡು ಬಂದಿತು. ಫೈನಲ್ ಪಂದ್ಯದ ಉದ್ಘಾಟನಾ ಸಮಾರಂಭ ಮುಗಿದು ಪಂದ್ಯ ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ಮಳೆ ಶುರುವಾಗಿ ಆಟಗಾರರು ಮೈದಾನಕ್ಕೆ ಇಳಿಯದಂತೆ ಮಾಡಿತು. 2 ಗಂಟೆಗೂ ಹೆಚ್ಚು ಸಮಯ ಒಂದೇ ಸಮನೆ ಬಿದ್ದ ಮಳೆಗೆ ಮೈದಾನದಲ್ಲಿ ನೀರು ತುಂಬಿ ಹರಿಯಿತು. ಇದರಿಂದ ಫೈನಲ್ ಪಂದ್ಯಕ್ಕೆ ಮಾಡಿದ್ದ ಸಿದ್ಧತೆಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಯಿತು. ಅದ್ದೂರಿಯಾಗಿ ಸಮಾರೋಪ ಸಮಾರಂಭ ಮಾಡಬೇಕು ಎಂದು ಆಸೆಯಿಟ್ಟುಕೊಂಡಿದ್ದ ಆಯೋಜಕರಿಗೆ ನಿರಾಶೆಯಾಯಿತು.
ಮಧ್ಯಾಹ್ನ 3 ಗಂಟೆ ವೇಳೆಗೆ ಮಳೆ ಸ್ವಲ್ಪ ಬಿಡುವು ನೀಡಿದಾಗ ಮೈದಾನದ ನೀರನ್ನು ಹೊರ ಚೆಲ್ಲಿ ಓವರ್ ಗಳ ಸಂಖ್ಯೆಯನ್ನು ಕಡಿತಗೊಳಿಸಿ ಪಂದ್ಯ ನಡೆಸಲಾಯಿತು.
ನಾಗರಹೊಳೆ ವನ್ಯಜೀವಿ ವಿಭಾಗದ ಆನೆಚೌಕೂರು, ಮತ್ತಿಗೋಡು, ಮಾವಕಲ್, ದೇವಮಚ್ಚಿ ಅರಣ್ಯಭಾಗಕ್ಕೂ ಉತ್ತಮ ಮಳೆ ಬಿದ್ದಿತು.
ಮೈದಾನದಲ್ಲಿ ಮಳೆಗೆ ಕೊಡೆ ಹಿಡಿದು ನಿಂತ ಅರಮಣಮಾಡ ಕುಟುಂಸ್ಥರು