ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗಿದೆ.
ರಭಸದ ಮಳೆ
ಸೋಮವಾರಪೇಟೆ: ಗಾಳಿ ಮತ್ತು ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ.
ಸೋಮವಾರ ಲಾಕ್ಡೌನ್ಗೆ ಮಧ್ಯಾಹ್ನದ 1ರ ತನಕ ಬಿಡುವು ನೀಡಿದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಂದ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಜನರು ಪಟ್ಟಣಕ್ಕೆ ಬಂದಿದ್ದರು.
ಬಸ್ ಸಂಚಾರ ಇಲ್ಲದಿರುವು ದರಿಂದ ಮತ್ತು ಮಳೆ ತೀವ್ರತೆ ಹೆಚ್ಚಾಗಿ ರುವುದರಿಂದ ಎಲ್ಲರೂ ನಾಲ್ಕು ಚಕ್ರದ ವಾಹನಗಳಲ್ಲಿಯೇ ಬಂದಿದ್ದರಿಂದ ಎಲ್ಲ ರಸ್ತೆಗಳಲ್ಲೂ ವಾಹನಗಳ ಸಂಖ್ಯೆ ಮಿತಿ ಮೀರಿತ್ತು. ಇದರಿಂದಾಗಿ ವಾಹನ ಚಾಲಕರು ಮುಂದೆ ಸಾಗಲು ಕಷ್ಟ ಪಡೆತ್ತಿದ್ದರು. ಒಂದು ಕಡೆ ಮಳೆಯ ತೀವ್ರತೆ ಮತ್ತು ವಾಹನಗಳ ಹೆಚ್ಚಳದಿಂದಾಗಿ ಕಾಲ್ನಡಿಗೆಯಲ್ಲಿ ಸಂಚರಿಸುವವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪರದಾಡುತ್ತಿದ್ದರು.
ಶಾಂತಳ್ಳಿ ಹೋಬಳಿಯಾದ್ಯಂತ ರಭಸದಿಂದ ಮಳೆ ಸುರಿಯುತ್ತಿರುವುದ ರಿಂದ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕಿದರು.
ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 73 ಮಿ.ಮೀ. ಮಳೆಯಾಗಿದೆ. ಉಳಿದಂತೆ ಶನಿವಾರಸಂತೆ 32, ಸುಂಟಿಕೊಪ್ಪ 36, ಸೋಮವಾರಪೇಟೆ 29.2, ಕೊಡ್ಲಿಪೇಟೆ 23 ಹಾಗೂ ಕುಶಾಲನಗರ 21.2 ಮಿ.ಮೀ. ಮಳೆಯಾದ ವರದಿಯಾಗಿದೆ.